ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಧನೆಯ ಕನಸಿಗೆ ನೀರೆರೆದ ಪತಿ

Last Updated 11 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ನಾನು ಬಸವನಗುಡಿಯಲ್ಲಿನ ಅಜ್ಜಿ– ತಾತನ ಮನೆಯಲ್ಲಿ  ಮುದ್ದಿನ ಮೊಮ್ಮಗಳಾಗಿ ಬೆಳೆದೆ. ನನ್ನ ಅಪ್ಪ ಡಿಸ್ಟ್ರಿಕ್ಟ್ ಮೆಡಿಕಲ್ ಆಫೀಸರ್ ಆಗಿದ್ದ ಕಾರಣ ಬೇರೆ ಬೇರೆ ಕಡೆಗೆ ವರ್ಗಾವಣೆಗೊಳ್ಳುತ್ತಿದ್ದರು. ಹೀಗಾಗಿ ನನ್ನನ್ನು ತಾತನ ಮನೆಯಲ್ಲಿಯೇ ಬೆಳೆಯಲು ಬಿಟ್ಟಿದ್ದರು. ನನ್ನ ತಂಗಿ ಹಾಗೂ ನನ್ನ ನಡುವೆ 10 ವರ್ಷದ ಅಂತರ. ಅವಳು ಅಪ್ಪ– ಅಮ್ಮನ ಜೊತೆ ಬೆಳೆದಳು.

ನನ್ನ ತಾತ ಎಸ್‌. ಜಿ ಶಾಸ್ತ್ರಿ ಅವರು ಡೈರೆಕ್ಟರ್‌ ಆಫ್‌ ಇಂಡಸ್ಟ್ರೀ ಆ್ಯಂಡ್‌ ಕಾಮರ್ಸ್‌ ಹುದ್ದೆಯಲ್ಲಿದ್ದರು. ಅಜ್ಜಿ ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ವಿಭಾಗದ ಅಧ್ಯಕ್ಷೆಯಾಗಿದ್ದರು. ತಾತ ಮೈಸೂರಲ್ಲಿ ಇದ್ದಾಗ ನಾನೂ ಅಲ್ಲಿಯೇ ಇದ್ದೆ. ಜಯ ಚಾಮರಾಜೇಂದ್ರ ಒಡೆಯರು ಹಾಗೂ ತ್ರಿಪುರಸುಂದರಮ್ಮಣ್ಣಿಯವರ ವಿವಾಹಕ್ಕೆ ನಾನೂ ಹೋಗಿದ್ದೆ. ತ್ರಿಪುರಸುಂದರಮ್ಮಣ್ಣಿಯವರು ತನಗೆ ಮದುವೆ ನಿಶ್ಚಯವಾದ ಬಳಿಕ ನನ್ನ ಅಜ್ಜಿಯ ಆಶೀರ್ವಾದ ಪಡೆಯಲು ಬಂದಿದ್ದರು. ಆಗ ನಾವೆಲ್ಲ ಒಟ್ಟಿಗೆ ಪೋಟೊ ತೆಗೆಸಿಕೊಂಡಿದ್ದೆವು. ಬಳಿಕ ತಾತ ಬೆಂಗಳೂರಿಗೆ ಬಂದು ನೆಲೆಸಿದ ಕಾರಣ, ಗಾಂಧಿಬಜಾರ್‌ನ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ಶಿಕ್ಷಣ ಮುಂದುವರೆಯಿತು.  ಆ ಕಾಲದಲ್ಲಿ ಮಕ್ಕಳ ಸರ್ಮತೋಮುಖ ಬೆಳವಣಿಗೆಗೆ ಅಧ್ಯಾಪಕರು ಶ್ರಮಿಸುತ್ತಿದ್ದರು. ಒಳಾಂಗಣ, ಹೋರಾಂಗಣ  ಕ್ರೀಡೆಗಳು, ಹಲವಾರು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ನಾನು ಭಾಗವಹಿಸುತ್ತಿದ್ದೆ.

ಬಳಿಕ ವಾಣಿ ವಿಲಾಸ ಸರ್ಕಾರಿ ಶಾಲೆಯಲ್ಲಿ  ನಾನು  ಪ್ರೌಢಶಾಲೆ ವಿದ್ಯಾಭ್ಯಾಸ ಮುಗಿಸಿದೆ. ಮಹಾರಾಣಿ ಕಾಲೇಜಿನಲ್ಲಿ 1951ರಲ್ಲಿ ನಾನು ಬಿ.ಎ ಮುಗಿಸಿದೆ. ಅರ್ಥಶಾಸ್ತ್ರ, ತತ್ವಶಾಸ್ತ್ರ, ಸಮಾಜಶಾಸ್ತ್ರ ವಿಷಯ ಆಯ್ಕೆ ಮಾಡಿಕೊಂಡಿದ್ದೆ. ಆಗ ಅಲ್ಲಿ ಜಯಲಕ್ಷ್ಮಮ್ಮಣ್ಣಿ ಅವರು  ಪ್ರಿನ್ಸಿಪಾಲರಾಗಿದ್ದರು. ಅವರು ಶಿಸ್ತಿನ ಪ್ರತಿರೂಪ. ಅವರು ಕೇವಲ ಪರೀಕ್ಷಾ ದೃಷ್ಟಿಯಿಂದ ಪಾಠ ಪಾಡುತ್ತಿರಲಿಲ್ಲ. ನಮ್ಮ ಸರ್ವತೋಮುಖ ಬೆಳವಣಿಗೆ ಅವರ ಗುರಿಯಾಗಿತ್ತು. ನಾನಿಂದು ಸಾಧನೆ ಮಾಡಿದ್ದೀನಿ ಅಂದರೆ ಜಯಲಕ್ಷ್ಮಮ್ಮಣ್ಣಿ ಅವರೇ ಕಾರಣ.

ಆ ಕಾಲದಲ್ಲಿಯೇ ನಮ್ಮ ಮನೆಯಲ್ಲಿ ಎಲ್ಲರೂ ವಿದ್ಯಾವಂತರೇ. ನನ್ನ ಸೋದರತ್ತೆ ಆ ಕಾಲದಲ್ಲಿ ಬಿ.ಎ ಪಾಸು ಮಾಡಿದ್ದರು. ಹೀಗಾಗಿ ನನಗೂ ನಾನು ಉನ್ನತ ವಿಧ್ಯಾಭ್ಯಾಸ ಮಾಡಲೇಬೇಕು ಎಂಬ ಹಂಬಲ ಇತ್ತು. ನಮ್ಮ ತಾತನ ಸಂಪೂರ್ಣ ಬೆಂಬಲ ನನಗಿತ್ತು. ಯಾವತ್ತೂ ಹೆಣ್ಣು ಹುಡುಗಿ ಅಂತಾ ಮನೆಯಲ್ಲಿಯೇ ಇರು ಎನ್ನುತ್ತಿರಲಿಲ್ಲ. ಅಜ್ಜಿ ವೈದಿಕ ಮನೆತನದವರು. ದೇವಸ್ಥಾನ, ದೇವರು, ಪೂಜೆ... ಇಂತಹ ವಾತಾವರಣದಲ್ಲಿಯೇ ನಾನು ಬೆಳೆದೆ. ನಮ್ಮ ತಾತ ಅಧಿಕಾರದಲ್ಲಿದ್ದರಿಂದ ಮನೆಯಲ್ಲಿ ಸಿರಿತನವೇ ಇತ್ತು. ಆದರೆ ಅವರು ತುಂಬ ಶಿಸ್ತಿನ ಮನುಷ್ಯ. ನಾನೂ ಶಿಸ್ತಿನಲ್ಲೇ ಬೆಳೆದೆ.

</p><p>ಆಗ ಹೈಸ್ಕೂಲು ಹೋಗುವ ಮುಂಚೆಯೇ ಹೆಣ್ಣುಮಕ್ಕಳು ಸೀರೆ ಉಡುತ್ತಿದ್ದರು. ನಾನೂ ಶಾಲೆಗೆ ಹೋಗುವಾಗ ಸೀರೆ ಉಟ್ಟುಕೊಂಡೇ ಹೋಗುತ್ತಿದ್ದೆ. ಅಜ್ಜಿ ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ವಿಭಾಗದ ಅಧ್ಯಕ್ಷೆಯಾಗಿದ್ದರಿಂದ ಸಾಹಿತ್ಯಿಕ ವಾತಾವರಣದಲ್ಲೇ ಬೆಳೆದ ನನಗೆ ಬೆಂಗಳೂರಿನಲ್ಲಿ ಸಾಹಿತಿಗಳ ಒಡನಾಟ ಸಿಕ್ಕಿತು.</p><p>1951ರಲ್ಲಿ ಫೆಬ್ರುವರಿ 16ರಂದು  ಕಿರ್ಲೋಸ್ಕರ್‌ ಕಂಪೆನಿಯಲ್ಲಿ ಎಂಜಿನಿಯರ್‌ ಆಗಿದ್ದ ಎಸ್‌.ಜಿ. ರಾಮಚಂದ್ರರೊಂದಿಗೆ ನನ್ನ ಮದುವೆಯಾಯಿತು. ನನಗೆ ಆಗ 19 ವರ್ಷ ವಯಸ್ಸು ಅಷ್ಟೇ. ನನಗೆ ಉನ್ನತ ವಿದ್ಯಾಭ್ಯಾಸ ಮಾಡಬೇಕು ಎಂದು ಆಸೆ ಇತ್ತು. ಆದರೆ ನಾನು ಮದುವೆಯಾಗಿ ಬಂದಿದ್ದು ಅವಿಭಕ್ತ ಕುಟುಂಬಕ್ಕೆ. ಹಾಗಾಗಿ ನನ್ನ ಆಸೆ ನೆರವೇರಲಿಲ್ಲ. ಮಾವ ಗೋಪಾಲಸ್ವಾಮಿ ಸೆಂಟ್ರಲ್‌ ಕಾಲೇಜಿನಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು. ಅತ್ತೆ ಮೀನಾಕ್ಷಮ್ಮ ಅಪ್ಪಟ ಗಾಂಧಿವಾದಿ. ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಅತ್ತೆಯವರೇ ನನ್ನನ್ನು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹ ನೀಡಿದವರು. ಮಕ್ಕಳು ಸ್ವಲ್ಪ ದೊಡ್ಡವರಾಗುತ್ತಿದ್ದಂತೆ ಟೈಲರಿಂಗ್‌ ಕಲಿಯುವಂತೆ ಹೇಳಿದರು. ಅತ್ತೆ ಮಲ್ಲೇಶ್ವರ ಎಂಟರ್‌ಪ್ರೈಸಿಂಗ್‌ ವರ್ಕಿಂಗ್‌ ವಿಮೆನ್‌ ಸೊಸೈಟಿ (MEWS ) ಕಾರ್ಯದರ್ಶಿಯಾಗಿದ್ದರು. ನಾನು 1960ರಲ್ಲಿ ಆ ಹಾಸ್ಟೆಲ್‌ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡೆ.</p><p>ಮಲ್ಲೇಶ್ವರ ಎಂಟರ್‌ಪ್ರೈಸಸ್‌ ವರ್ಕಿಂಗ್‌ ವಿಮೆನ್‌ ಸೊಸೈಟಿಯನ್ನು 1952ರಲ್ಲಿ ಸರ್ವೇಪಲ್ಲಿ ರಾಧಾಕೃಷ್ಣನ್‌ ಅವರ ಪುತ್ರಿ ಶಕುಂತಲಾ ಅವರು ಸ್ಥಾಪಿಸಿದ್ದರು. ಬಿಡುವಿನ ಸಮಯದಲ್ಲಿ ಎಲ್ಲಾ ಸದಸ್ಯೆಯರು ಸೇರಿ ಮನರಂಜನಾ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದ್ದರು. ಬ್ಯಾಡ್ಮಿಂಟನ್‌, ಟೆನ್ನಿಸ್‌ ಆಟ ಆಡುತ್ತಿದ್ದರು. ಆದರೆ ಸಂಘ ಇಷ್ಟಕ್ಕೆ ಸೀಮಿತವಾಗಬಾರದು ಎಂದು ಉದ್ಯೋಗಸ್ಥ ಮಹಿಳೆಯರಿಗೆ ಹಾಸ್ಟೆಲ್‌ ಆರಂಭಿಸಿದರು. 1960–70ರ ದಶಕದಲ್ಲಿ ಹೆಣ್ಣುಮಕ್ಕಳು ಹೊರಗೆ ಹೋಗಿ ಕೆಲಸ ಮಾಡುವುದೆಂದರೆ ಈಗಿನಷ್ಟು ಸುಲಭ ಆಗಿರಲಿಲ್ಲ. ಅದರಲ್ಲೂ ಸಂಪ್ರದಾಯಸ್ಥ ಮಧ್ಯಮವರ್ಗದ ಹೆಣ್ಣು ಮಕ್ಕಳು ಅನಿವಾರ್ಯವಾಗಿ ದುಡಿಯಲು ಹೊರಗೆ ಬಂದರೆ ಅವರಿಗೆ ವಾಸ್ತವ್ಯದ ಸಮಸ್ಯೆ ಕಾಡುತ್ತಿತ್ತು. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಎಂಬಂತೆ ಹಾಸ್ಟೆಲ್‌ ಆರಂಭಿಸಿದೆವು. ಈ ಸಂಸ್ಥೆ ಉದ್ಯೋಗಸ್ಥ ಮಹಿಳೆಯರಿಗೆ ಸೂಕ್ತ ಭದ್ರತೆ, ಊಟ , ವಸತಿ ಅನುಕೂಲ ನೀಡುತ್ತಿತ್ತು. ಆಗ ಮಲ್ಲೇಶ್ವರದ ಆರನೇ ಮುಖ್ಯರಸ್ತೆಯಲ್ಲಿ ಬಾಡಿಗೆಗೆ ಸಣ್ಣ ಮನೆಯಲ್ಲಿ ಹಾಸ್ಟೆಲ್‌ ಆರಂಭಿಸಿದ್ದೇವು. ಬಳಿಕ ಕೆಲ ವರ್ಷಗಳ ನಂತರ 17ನೇ ಅಡ್ಡರಸ್ತೆಯಲ್ಲಿ ಸ್ವಂತ ಕಟ್ಟಡಕ್ಕೆ ಸ್ಥಳಾಂತರವಾಯಿತು. ಈಗಲೂ ಅದೇ ಕಟ್ಟಡದಲ್ಲಿ ಹಾಸ್ಟೆಲ್‌ ಕಾರ್ಯನಿರ್ವಹಿಸುತ್ತಿದೆ. ಆಗ ಒಬ್ಬ ಮಹಿಳೆಗೆ ತಿಂಗಳ ಖರ್ಚು ಬರೀ ₹300.</p><p>ನಾನು ಈಗ ಗೌರವ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿರುವ  ಮಲ್ಲೇಶ್ವರದ ಲೇಡಿಸ್‌ ಅಸೋಸಿಯೇಷನ್‌ನ ಸದಸ್ಯತ್ವ  1960ರಲ್ಲಿಯೇ ಸಿಕ್ಕಿತು. 1996ರಿಂದ ಈ ಸಂಸ್ಥೆಯ ಗೌರವ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದೇನೆ. ಮಹಿಳೆಯರಿಂದ ಮಹಿಳೆಯರಿಗಾಗಿ ನಡೆಸುವ ಸಂಸ್ಥೆ ಇದೊಂದೇ. ಇಲ್ಲಿ ಹೆಣ್ಣುಮಕ್ಕಳು ಎಲ್‌.ಕೆ.ಜಿಯಿಂದ ಡಾಕ್ಟರೇಟ್‌ ತನಕ ಓದುವ ಸೌಲಭ್ಯ ಇದೆ. ಇಲ್ಲಿ ಮಧ್ಯಮ ವರ್ಗದ ಹೆಣ್ಣುಮಕ್ಕಳಿಗೆ ಅವಕಾಶ ಹಾಗೂ ನಾವು ಯಾವುದೇ ಮಕ್ಕಳಿಂದ ಡೋನೇಷನ್‌ ಪಡೆಯುವುದಿಲ್ಲ. ಪ್ರತಿ ವರ್ಷ ನಮ್ಮ ಸಂಸ್ಥೆ ಶೇಕಡ 90ಕ್ಕಿಂತ ಅಧಿಕ ಫಲಿತಾಂಶ ಗಳಿಸಿದೆ. ಪಿಯುಸಿ ನಂತರ ಇಲ್ಲಿ  ಬಿ.ಕಾಂ., ಎಂ.ಕಾಂ, ಡಾಕ್ಟರೇಟ್‌ ಓದುವ ಸೌಲಭ್ಯ ಇದೆ. ಇಲ್ಲಿ ಓದಿದ ಹೆಣ್ಣುಮಕ್ಕಳು ಇಲ್ಲಿಯೇ ಉಪನ್ಯಾಸಕರು, ಶಿಕ್ಷಕರಾಗಿ ಉದ್ಯೋಗವನ್ನೂ ನೀಡಿದ್ದೇವೆ. ನಮ್ಮ ಶಿಕ್ಷಣ ಸಂಸ್ಥೆಗೆ ಕೆಲ ದಾನಿಗಳು ಬಡ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ದತ್ತಿನಿಧಿ ಸ್ಥಾಪಿಸುತ್ತಾರೆ. ದಾನಿಗಳ ನೆರವಿನಿಂದ ಹೆಣ್ಣುಮಕ್ಕಳು ಓದಿ, ಉನ್ನತ ಸ್ಥಾನ ಪಡೆಯುವುದನ್ನು ನೋಡುವುದಕ್ಕೆ ಖುಷಿ. ಇಲ್ಲಿ ನರ್ಸರಿಗೆ ಸೇರಿದ ಹೆಣ್ಣುಮಗು ಉನ್ನತ ವಿದ್ಯಾಭ್ಯಾಸ ಪಡೆದು ವಿದ್ಯಾ ಸಂಪನ್ನಳಾಗಿ ಸಾಮಾಜಿಕ ಕಾರ್ಯದಲ್ಲಿ ತೊಡಗಬೇಕೆಂಬುದೇ ನನ್ನಾಸೆ. ಇಲ್ಲಿ  ಫ್ಯಾಷನ್‌ ಡಿಸೈನಿಂಗ್‌, ಸೆಕ್ರೇಟೇರಿಯಲ್‌ ಪ್ರಾಕ್ಟೀಸ್‌, ಸಂವಹನ, ಬ್ಯೂಟಿಷಿಯನ್‌, ಬ್ಯುಸಿನೆಸ್‌ ಮ್ಯಾನೆಜ್ಮೆಂಟ್‌ ಕೋರ್ಸ್‌, ವಿದೇಶಿ ಭಾಷೆಗಳ ಕಲಿಕೆ ಮೊದಲಾದವೂ ಇವೆ. ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಸಮಿತಿ(ನ್ಯಾಕ್‌) ನಮ್ಮ ಸಂಸ್ಥೆಗೆ ‘ಎ’ ಗ್ರೇಡ್‌ ನೀಡಿದೆ.<br/>&#13; <br/>&#13; <img alt="" src="https://cms.prajavani.net/sites/pv/files/article_images/2018/03/11/file6z6zlr056mu6rh21o9s.jpg" style="width: 600px; height: 744px;" data-original="/http://www.prajavani.net//sites/default/files/images/file6z6zlr056mu6rh21o9s.jpg"/><br/>&#13; <em><strong>ತಮ್ಮ ಮದುವೆ ಆರತಕ್ಷತೆಯಲ್ಲಿ ಪತಿ ರಾಮಚಂದ್ರ ಅವರೊಂದಿಗೆ ಮಂಗಳಾ</strong></em></p><p>ನನ್ನ ಜೀವನದ ಮೂರು ಅದ್ಭುತ ಕ್ಷಣಗಳ ಬಗ್ಗೆ ನಾನು ಇಲ್ಲಿ ಸ್ಮರಿಸಿಕೊಳ್ಳಲೇಬೇಕು. 1981ರಲ್ಲಿ ನನ್ನ ಮಗನಿಗೆ ಮಗ ಹುಟ್ಟಿದಾಗ ಮರಿಮೊಮ್ಮಗನ ಜೊತೆ ನನ್ನತ್ತೆಗೆ ಕನಕಾಭಿಷೇಕ ನಡೆಯಿತು. ಇಂತಹ ಭಾಗ್ಯ ಎಲ್ಲರಿಗೂ ಸಿಗಲ್ಲ. ಅದನ್ನು ಕಣ್ಣಿಂದ ನೋಡುವುದೇ ಖುಷಿ. ಮತ್ತೊಂದು ನನ್ನ ಪತಿ ರಾಮಚಂದ್ರ ಅವರಿಗೆ ಕೋಲ್ಕತ್ತದಲ್ಲಿ ಸನ್ಮಾನ ಕಾರ್ಯಕ್ರಮ ಇತ್ತು. ಅಲ್ಲಿ ರಾಮಚಂದ್ರ ಅವರನ್ನು ಮದರ್‌ ತೆರೆಸಾ ಅವರು ಸನ್ಮಾನಿಸಿದರು. ಅದಾದ ಬಳಿಕ ಮದರ್‌ ತೆರೆಸಾ ಅವರ ಕೈ ಹಿಡಿದುಕೊಂಡು ನಾನು ಮಾತನಾಡಿ, ಆಶೀರ್ವಾದ ಪಡೆದೆ. ಇದೊಂದು ನನ್ನ ಜೀವನದ ಅವಿಸ್ಮರಣೀಯ ಘಳಿಗೆ. ಮೂರನೆಯದು ನಮ್ಮ ಶಾಲೆಯ ಶಿಕ್ಷಕರಿಗೆ ಉತ್ತಮಶಿಕ್ಷಕ ಪ್ರಶಸ್ತಿ ಬಂದ ದಿನ ನನ್ನನ್ನು ಹಿಡಿಯುವವರೇ ಇಲ್ಲ.</p><p>ನನಗೆ ಮೂರು ಜನ ಮಕ್ಕಳು. ದೊಡ್ಡವರಾದ ಉದಯ್‌, ಭರತ್‌ ವ್ಯಾಪಾರ ಕ್ಷೇತ್ರದಲ್ಲಿದ್ದರೆ, ಕಿರಿಮಗ ಅರವಿಂದ್‌ ವೈದ್ಯ. ನನ್ನ ಓರಗೆಯವರು ಎಲ್ಲರೂ ನಮ್ಮ ಮಕ್ಕಳು ವಿದೇಶಕ್ಕೆ ಹೋಗಬೇಕು ಎಂದು ಆ ಕಾಲದಲ್ಲಿ ಆಸೆ ಪಡುತ್ತಿದ್ದರು. ಆದರೆ ನನಗೆ ಮೊದಲಿನಿಂದಲೂ ವಿದೇಶಿ ಮೋಹ ಇಲ್ಲ. ಒಂದು ಬಾರಿ ಇಂಗ್ಲೆಂಡ್‌ಗೆ ಹೋದಾಗ ಒಬ್ಬ ಪರಿಚಿತ ಹುಡುಗ ಲಿಫ್ಟ್‌ನಲ್ಲಿ ಲಿಫ್ಟ್‌ಬಾಯ್‌ ಆಗಿ ಕೆಲಸ ಮಾಡುತ್ತಿದ್ದ. ಪ್ರತಿಭಾವಂತ ಹುಡುಗ. ಆಗ ಅಂತಹ ಕೆಲಸ ಮಾಡಲು ಇಲ್ಲಿಗೆ ಬರಬೇಕಾ ಎಂದು ಮನಸು ಪ್ರಶ್ನಿಸಿತ್ತು. ನನ್ನ ಮಕ್ಕಳು ಸ್ವದೇಶದಲ್ಲಿಯೇ ಸಾಧನೆ ಮಾಡಲಿ ಎಂದು ನನ್ನ ಆಸೆಯಾಗಿತ್ತು. ಈಗ ಮೊಮ್ಮಕ್ಕಳು ಸಹಾ ಬೇರೆ ಬೇರೆ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಅದೇ ಖುಷಿ ನನಗೆ.</p><p>ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಸ್ತ್ರೀ ಇರುತ್ತಾಳೆ ಎಂಬುದು ಲೋಕಾರೂಢಿ. ನನ್ನ ಸಾಧನೆಗೆ ನನ್ನ ಪತಿ ಕಾರಣ. ಅವರ ಕಾರ್ಯತತ್ಪರತೆ, ಕಾರ್ಯದಕ್ಷತೆ, ಕೆಲಸದಲ್ಲಿನ ಉತ್ಸಾಹ ನನ್ನ ಮೇಲೆ ತುಂಬಾ ಪ್ರಭಾವ ಬೀರಿದೆ. ಅವರು ನನಗೆ ಗ್ಲೈಂಡಿಂಗ್‌, ರೈಫಲ್‌ ಶೂಟಿಂಗ್‌ ಮುಂತಾದ ತರಬೇತಿಗಳಿಗೆ ಕಳುಹಿಸಿದ್ದರು. ಸ್ವತಂತ್ರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಜವಾಬ್ದಾರಿಯನ್ನು ಕೊಟ್ಟರು. ಸಾಂಸಾರಿಕ ಜೀವನಕ್ಕೆ ಕಾಲಿಟ್ಟು 50 ವರ್ಷ ಅವರೊಂದಿಗೆ ಜೀವನ ಹಂಚಿಕೊಂಡಿರುವ  ಎಲ್ಲಾ ಕ್ಷಣಗಳು ಅವಿಸ್ಮರಣೀಯ. 2002ರಲ್ಲಿ ಅವರು ದೈವಾಧೀನರಾದರು. ಅವರ ಎಲ್ಲಾ ಪ್ರೋತ್ಸಾಹ ನನಗೆ ಹಾಸ್ಟೆಲ್‌ ನಿರ್ವಹಣೆ ಹಾಗೂ ಮಲ್ಲೇಶ್ವರ ಲೇಡಿಸ್‌ ಅಸೋಸಿಯೇಷನ್‌ ನಡೆಸಲು ಸಹಾಯ ಮಾಡಿವೆ.<br/>&#13; ****<br/>&#13; <strong>ಮಂಗಳಾ ರಾಮಚಂದ್ರ ಪರಿಚಯ</strong><br/>&#13; <strong>ಜನನ:</strong> ಮೇ 17, 1932<br/>&#13; <strong>ಅಪ್ಪ</strong>– ಡಾ. ಶಾಮಣ್ಣ, ಅಮ್ಮ– ರುಕ್ಮಿಣಮ್ಮ<br/>&#13; <strong>ಪತಿ</strong>– ರಾಮಚಂದ್ರ, ಮಕ್ಕಳು– ಉದಯ್‌, ಭರತ್‌, ಅರವಿಂದ್‌<br/>&#13; <strong>ವಿದ್ಯಾಭ್ಯಾಸ</strong>– ಮಹಾರಾಣಿ ಕಾಲೇಜಿನಲ್ಲಿ ಬಿ.ಎ. ಪದವಿ<br/>&#13; <strong>ವಿಳಾಸ</strong>– ನಂ.94, 11ನೇ ಅಡ್ಡರಸ್ತೆ, ಮಲ್ಲೇಶ್ವರ, ಕೃಷ್ಣದೇವರ ದೇವಸ್ಥಾನದ ಬಳಿ<br/>&#13; <strong>ಸಂಪರ್ಕ</strong>– 92431 07360</p><p> </p></p>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT