ಮುಂಬೈ: ‘ಆಜಾದ್ ಮೈದಾನದಲ್ಲಿರುವ ಪ್ರತಿಭಟನಾನಿರತರ ಪೈಕಿ ಶೇ 95ರಷ್ಟು ಮಂದಿ ‘ತಾಂತ್ರಿಕವಾಗಿ’ ರೈತರಲ್ಲ, ಬುಡಕಟ್ಟು ಜನರು’ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಹೇಳಿದ್ದಾರೆ.
ಮಧ್ಯಾಹ್ನ ಒಂದು ಗಂಟೆಗೆ ಮುಖ್ಯಮಂತ್ರಿಗಳು ಪ್ರತಿಭಟನಾನಿರತರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ವಿಧಾನಭವನದ ಬಳಿ ತೆರಳಿ ಪ್ರತಿಭಟನೆ ನಡೆಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಮುಖ್ಯಮಂತ್ರಿ ಜತೆಗಿನ ಮಾತುಕತೆ ಬಳಿಕ ಪ್ರತಿಭಟನಾಕಾರರು ತೀರ್ಮಾನ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಹಾರಾಷ್ಟ್ರದ ರೈತರು ಹಮ್ಮಿಕೊಂಡಿರುವ ಪ್ರತಿಭಟನಾ ಮೆರವಣಿಗೆ ಸೋಮವಾರ ಬೆಳಿಗ್ಗೆ ಮುಂಬೈನ ಆಜಾದ್ ಮೈದಾನ ತಲುಪಿತ್ತು. ನಾಸಿಕ್–ಮುಂಬೈ ಮಾರ್ಗವಾಗಿ 180 ಕಿಲೋಮೀಟರ್ ದೂರ ಮೆರವಣಿಗೆ ಸಾಗಿ ಬಂದಿತ್ತು.
ಅಖಿಲ ಭಾರತೀಯ ಕಿಸಾನ್ ಸಭಾ, ಕಮ್ಯುನಿಸ್ಟ್ ಪಕ್ಷದ (ಮಾರ್ಕ್ಸ್ವಾದ) ರೈತ ವಿಭಾಗದ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಪ್ರತಿಭಟನೆಗೆ ಮಹಾರಾಷ್ಟ್ರದ ಆಡಳಿತಾರೂಢ ಮಿತ್ರಪಕ್ಷ ಶಿವಸೇನಾ ಸಹ ಬೆಂಬಲ ನೀಡಿದೆ.