ಕೋಲಾರ: ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ಕಲ್ಪಿಸಲು ಡಿಜಿಟಲ್ ಆರೋಗ್ಯ ವಾಹಿನಿ ಕಾರ್ಯ ಚಟುವಟಿಕೆ ಆರಂಭಿಸಿರುವುದು ಇತರೆ ರಾಜ್ಯಗಳಿಗೆ ಮಾದರಿಯಾಗಿದೆ ಎಂದು ಕೇಂದ್ರ ನೀತಿ ಆಯೋಗದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅಮಿತಾಬ್ ಕಾಂತ್ ಅಭಿಪ್ರಾಯಪಟ್ಟರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಸೂಚನೆ ಮೇರೆಗೆ ಕೇಂದ್ರ ನೀತಿ ಆಯೋಗದ ತಂಡ ಭಾನುವಾರ ನಗರದ ಡಿಜಿಟಲ್ ನರ್ವ್ ಸೆಂಟರ್ಗೆ ಭೇಟಿ ನೀಡಿ ವೀಕ್ಷಿಸಿ ಮಾತನಾಡಿದರು.
ಈ ಸೇವೆಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಬದಲಿಗೆ 5 ಸಾವಿರ ಮಂದಿಗೆ ಒಂದು ಸಬ್ ಸೆಂಟರ್ ಸ್ಥಾಪಿಸಿ ಅನುಷ್ಠಾನಗೊಳಿಸಿದರೆ ಮತ್ತಷ್ಟು ಉತ್ತಮ ಸೇವೆ ಒದಗಿಸಬಹುದು. ಈ ಯೋಜನೆಯನ್ನು ದೇಶದಾದ್ಯಂತ ವಿಸ್ತರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಹೇಳಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಆರ್.ರಮೇಶ್ ಕುಮಾರ್ ಮಾತನಾಡಿ, ಈಗಾಗಲೇ ಡಿಜಿಟಲ್ ಆರೋಗ್ಯ ವಾಹಿನಿ ಕಾರ್ಯ ಆರಂಭಿಸಲಾಗಿದ್ದು, ಶೇ 60ರಷ್ಟು ಮಂದಿ ಇದರಡಿಯಲ್ಲಿ ನೋದಾಯಿಸಿಕೊಂಡು ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಆಶಾ ಕಾರ್ಯಕರ್ತೆಯರು ತಮಗೆ ನೀಡಿರುವ ಟ್ಯಾಬ್ ಮೂಲಕ ಅನಾರೋಗ್ಯಕ್ಕೆ ತುತ್ತಾದವರ ವಿವರ ನೋಂದಾಯಿಸುತ್ತಾರೆ. ಆನಂತರ ಅವರಿಗೆ ನೀಡಬಹುದಾದ ಚಿಕಿತ್ಸೆಯ ವಿವರ, ನಂತರ ಯಾವ ತಜ್ಞರನ್ನು ಸಂಪರ್ಕಿಸಬೇಕು ಎಂಬುದನ್ನು ದೂರವಾಣಿ ಮೂಲಕ ಮಾಹಿತಿ ಒದಗಿಸುತ್ತಾರೆ ಎಂದರು.
ರೋಗಿಯ ಹೆಸರು ನೋಂದಾಯಿಸಿದ ಕೂಡಲೇ ಪರಿಚಿತ ರೋಗಿಯಾಗುತ್ತಾನೆ. ಅವರನ್ನು ಡಿಜಿಟಲ್ ಆರೋಗ್ಯ ವಾಹಿನಿಯೇ ಸಂಪರ್ಕಿಸಿ, ಅಗತ್ಯ ಚಿಕಿತ್ಸೆ ಸಿಗುವ ಜಾಗ, ತಜ್ಞರನ್ನು ಭೇಟಿ ಮಾಡಬೇಕಾದ ಮಾಹಿತಿ ನೀಡಲಿದ್ದು, ಅಲ್ಲಿ ಉಚಿತ ಚಿಕಿತ್ಸೆ ಮತ್ತು ಉಚಿತ ಔಷಧ ಒದಗಿಸಲಾಗುತ್ತದೆ ಎಂದು ವಿವರಿಸಿದರು.
ಟಾಟಾ ಸಂಸ್ಥೆಯ ಮುಖ್ಯಸ್ಥ ಬನ್ಸಾಲಿ ಮಾತನಾಡಿ, ಕಂಪನಿಗೆ ಬಂದಿರುವ ಲಾಭದ ಹಣ ಸಾಮಾಜಿಕ ಸೇವೆಗೆ ಉಪಯೋಗಿಸಿಕೊಳ್ಳಲಾಗುತ್ತಿದೆ. ಡಿಜಿಟಲ್ ಆರೋಗ್ಯ ವಾಹಿನಿಯ ಸೇವೆ ಜಿಲ್ಲೆಯ ಜನಕ್ಕೆ ಕಲ್ಪಿಸಲು ನಿರಂತರವಾಗಿ ಶ್ರಮಿಸುತ್ತೆವೆ ಎಂದು ತಿಳಿಸಿದರು.
ಕೇಂದ್ರ ನೀತಿ ಆಯೋಗದ ಸಲಹೆಗಾರರಾದ ವಿ.ಕೆ.ಪಾಲ್, ಅಲೋಕ್ ಕುಮಾರ್, ಡಾ.ದಿನೇಶ್ ಅರೋರಾ ಕೇಂದ್ರಕ್ಕೆ ಭೇಟಿ ನೀಡಿದ್ದರು.
ಟಾಟಾ ಟ್ರಸ್ಟ್ ನಿರ್ದೇಶಕರಾದ ಗಿರೀಶ್ ಕೃಷ್ಣಮೂರ್ತಿ, ಡಾ.ವಿಜಯಕುಮಾರ್ ಇದ್ದರು.