ಚನ್ನಪಟ್ಟಣ: ತಾಲ್ಲೂಕಿನ ಪುಟ್ಟಪ್ಪನದೊಡ್ಡಿ ಬಳಿ ಕಾರು ಕಳವು ಮಾಡಿದ್ದ ಮೂರು ಆರೋಪಿಗಳನ್ನು ಪಟ್ಟಣದ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಪಾಂಡವಪುರ ವಿಸಿ ಕಾಲೊನಿ ಹೇಮಂತ್ ಸಾಗರ್, ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಶೆಟ್ಟಿಹಳ್ಳಿ ಹೋಬಳಿ ಚಿನ್ನೇನಹಳ್ಳಿ ಗ್ರಾಮದ ಉಮೇಶ್, ಆನೇಕಲ್ ತಾಲ್ಲೂಕಿನ ಆದಿಗೊಂಡನಳ್ಳಿ ಗ್ರಾಮದ ಚಿನ್ನಕೃಷ್ಣ ಬಂಧಿತ ಆರೋಪಿಗಳು.
ಬಂಧಿತರು ಫೆ.23ರಂದು ಬೆಂಗಳೂರಿನ ಬೊಮ್ಮನಹಳ್ಳಿಯಿಂದ ಮೈಸೂರಿಗೆ ಹೋಗಲೆಂದು ಓಲಾ ಕಾರು ಬಾಡಿಗೆಗೆ ತೆಗೆದುಕೊಂಡು ಮಾರ್ಗ ಮಧ್ಯೆ ಪುಟ್ಟಪ್ಪನದೊಡ್ಡಿ ಬಳಿ ಮೂತ್ರ ವಿಸರ್ಜನೆ ಮಾಡುವ ನೆಪದಲ್ಲಿ ಕಾರು ನಿಲ್ಲಿಸಿ ಚಾಲಕನ ಮೇಲೆ ಹಲ್ಲೆ ನಡೆಸಿ ಕಾರು, ಎರಡು ಮೊಬೈಲ್, ₹5 ಸಾವಿರ ನಗದು ಸಮೇತ ಪರಾರಿಯಾಗಿದ್ದರು. ಕಾರು ಚಾಲಕ ಆನಂತರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣದ ಜಾಡು ಹಿಡಿದ ಪೊಲೀಸರು ಹೆದ್ದಾರಿ ವಾಹನಗಳ ಕಳವು ಮಾಡುವ ತಂಡದ ಮಾಹಿತಿ ಪಡೆದು ಮೂರು ಜನರ ತಂಡವನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಎರಡು ಇನ್ನೋವಾ ಕಾರು, 6ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಹೆದ್ದಾರಿಗಳಲ್ಲಿ ಕಾರುಗಳನ್ನು ದರೋಡೆ ಮಾಡುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿಗಳ ಮೇಲೆ ಬೆಂಗಳೂರಿನ ಹುಳಿಮಾವು, ಕೆಂಗೇರಿ, ಎಲೆಕ್ಟ್ರಾನಿಕ್ ಸಿಟಿ, ಕೋಣನಕುಂಟೆ ಸೇರಿದಂತೆ ವಿವಿಧ ಠಾಣೆಗಳಲ್ಲಿ ಒಟ್ಟು ಏಳು ಪ್ರಕರಣಗಳು ದಾಖಲಾಗಿವೆ.
ಆರೋಪಿಗಳನ್ನು ಬಂಧಿಸಿದ ತಂಡದಲ್ಲಿ ಸರ್ಕಲ್ ಇನ್ ಸ್ಪೆಕ್ಟರ್ಗಳಾದ ಎ.ಪಿ.ಕುಮಾರ್, ಸಂಜೀವೇಗೌಡ, ಶಿವಕುಮಾರ್, ಸಬ್ ಇನ್ಸ್ಪೆಕ್ಟರ್ ಗಳಾದ ವಸಂತಕುಮಾರ್, ಶಿವಕುಮಾರ್, ಹೇಮಂತ್ ಕುಮಾರ್, ಸಿಬ್ಬಂದಿ ರಾಮಕೃಷ್ಣೇಗೌಡ, ಸಿದ್ದರಾಜು, ಮಲ್ಲಿಕಾರ್ಜುನ, ಸಿದ್ದಗಂಗಪ್ಪ ಕಾರ್ಯನಿರ್ವಹಿಸಿದ್ದರು.