ಶ್ರೀರಂಗಪಟ್ಟಣ (ಮಂಡ್ಯ ಜಿಲ್ಲೆ): ತಾಲ್ಲೂಕಿನ ಕೆ.ಶೆಟ್ಟಹಳ್ಳಿ ಮೀಸಲು ಅರಣ್ಯದಲ್ಲಿ ಸೋಮವಾರ ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿದ್ದು, ಕುರುಚಲು ಗಿಡಗಳು ಸುಟ್ಟು ಹೋಗಿವೆ.
ಕರಿಘಟ್ಟದ ಟ್ರೀ ಪಾರ್ಕ್ ಬಳಿ ಕಾಣಿಸಿಕೊಂಡ ಬೆಂಕಿ ಕೋಟೆಯ ಅವಶೇಷ ಇರುವ ತುತ್ತ ತುದಿಯವರೆಗೂ ವ್ಯಾಪಿಸಿದೆ.
ಮಧ್ಯಾಹ್ನ 12 ಗಂಟೆ ಹೊತ್ತಿಗೆ ಕಾಣಿಸಿಕೊಂಡ ಬೆಂಕಿಯನ್ನು 2 ಗಂಟೆ ವೇಳೆಗೆ ಅರಣ್ಯ ಇಲಾಖೆ ಸಿಬ್ಬಂದಿ ತಹಬದಿಗೆ ತಂದಿದ್ದಾರೆ. ಬೆಂಕಿಯ ಕೆನ್ನಾಲಿಗೆಗೆ ಕುರುಚಲು ಗಿಡಗಳು ಮಾತ್ರ ಸುಟ್ಟಿವೆ. ಬೆಲೆ ಬಾಳುವ ಮರಗಳಿಗೆ ಹಾನಿಯಾಗಿಲ್ಲ ಎಂದು ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.
ಕರಿಘಟ್ಟ ಅರಣ್ಯಕ್ಕೆ ಪ್ರಸಕ್ತ ಬೇಸಿಗೆಯಲ್ಲಿ ಎರಡನೇ ಬಾರಿ ಬೆಂಕಿ ಬಿದ್ದಂತಾಗಿದೆ. 20 ದಿನಗಳ ಹಿಂದೆ ಅರಣ್ಯ ಇಲಾಖೆ ಸಿಬ್ಬಂದಿ ಫೈರ್ಲೈನ್ ಮಾಡುವ ಸಂದರ್ಭದಲ್ಲಿ ಬೆಂಕಿ ಅರಣ್ಯಕ್ಕೆ ವ್ಯಾಪಿಸಿತ್ತು.