ಬೆಂಗಳೂರು: ದೆಹಲಿಯ ಭಾರತೀಯ ಕೃಷಿ ಸಂಶೋಧನಾ ಪರಿಷತ್ 2016-17ನೇ ಸಾಲಿನಲ್ಲಿ ನಡೆಸಿದ ಕಿರಿಯ ಸಂಶೋಧನಾ ಫೆಲೋಷಿಪ್ (ಜೆಆರ್ಎಫ್) ಪರೀಕ್ಷೆಯಲ್ಲಿ ಕೃಷಿ ವಿಶ್ವವಿದ್ಯಾಲಯವು ಪ್ರಥಮ ಸ್ಥಾನ ಗಳಿಸಿದೆ.
ವಿಶ್ವವಿದ್ಯಾಲಯದ 50 ವಿದ್ಯಾರ್ಥಿಗಳು ‘ಕೃಷಿ ವಿಜ್ಞಾನಗಳು’ ವಿಷಯ ಹಾಗೂ 10 ವಿದ್ಯಾರ್ಥಿಗಳು ‘ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ’ ವಿಷಯದಲ್ಲಿ ತೇರ್ಗಡೆ ಹೊಂದಿದ್ದಾರೆ.
ದೇಶದ 60 ಕೃಷಿ ವಿಶ್ವವಿದ್ಯಾಲಯಗಳು, ಮೂರು ಕೇಂದ್ರೀಯ ಮತ್ತು ನಾಲ್ಕು ಡೀಮ್ಡ್ ಕೃಷಿ ವಿಶ್ವವಿದ್ಯಾಲಯಗಳ ಒಟ್ಟು 475 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.
ದೆಹಲಿಯಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಕೇಂದ್ರ ಕೃಷಿ ಸಚಿವ ರಾಧಾಮೋಹನ್ ಸಿಂಗ್ ಅವರು ಕೃಷಿ ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿ ಡಾ.ಎಂ.ಎಸ್.ನಟರಾಜು ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.