ತುಮಕೂರು: ಮಹಿಳೆಯರು ಹೆಚ್ಚು ವಿದ್ಯಾವಂತರಾದಾಗ ಮಾತ್ರ ದೇಶ ಅಭಿವೃದ್ಧಿಯಾಗಲು ಸಾಧ್ಯ ಎಂದು ಸಾಹಿತಿ ಕವಿತಾಕೃಷ್ಣ ಹೇಳಿದರು.
ನಗರದ ನಿರ್ಭಯ ಮಹಿಳಾ ಜಾಗೃತಿ ವೇದಿಕೆ ಆಯೋಜಿಸಿದ್ಧ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿಧಾನಸಭೆ, ಲೋಕಸಭೆ, ತುಮಕೂರು ಮಹಾನಗರ ಪಾಲಿಕೆಯಲ್ಲಿನ ಸದಸ್ಯೆಯರು ತಮ್ಮ ಹಕ್ಕು ಸಾಧಿಸಬೇಕು. ಗಂಡಂದಿರೇ ಅಧಿಕಾರ ನಡೆಸುವಂತಾಗಬಾರದು ಎಂದು ಹೇಳಿದರು.
ನಮ್ಮ ನಾಡಿನಲ್ಲಿ ಜನಿಸಿ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ ಒನಕೆ ಓಬವ್ವ, ಅಬ್ಬಕ್ಕ ಅವರಂತಹ ವೀರ ಮಹಿಳೆಯರು, ಸಮಾಜಕ್ಕೆ ಶ್ಲಾಘನೀಯ ಸೇವೆ ಮಾಡಿರುವ ಸಾಲುಮರದ ತಿಮ್ಮಕ್ಕ, ಸೂಲಗಿತ್ತಿ ನರಸಮ್ಮ ಅವರಂತಹವರೇ ನಮಗೆ ಮಾರ್ಗದರ್ಶಕರು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ನಿರ್ಭಯಾ ಮಹಿಳಾ ಜಾಗೃತಿ ವೇದಿಕೆ ಅಧ್ಯಕ್ಷ ಗೀತಾ ನಾಗೇಶ್ ಮಾತನಾಡಿ, ‘ಮಹಿಳೆಯರು ಉನ್ನತ ಶಿಕ್ಷಣ ಪಡೆಯಬೇಕು ಎಂದರು.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಮಹಿಳೆಯೇ ಆಗಿದ್ದಾರೆ. ನಮ್ಮ ಜಿಲ್ಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಣಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿ ಮಹಿಳೆಯರೇ ಆಗಿದ್ದಾರೆ. ಇದು ಮಹಿಳಾ ಸಾಧಕಿಯರ ಸಾಧನೆಗೆ ಹಿಡಿದ ಕನ್ನಡಿ ಎಂದು ನುಡಿದರು.
ಆರ್.ಎಸ್.ವೀರಪ್ಪದೇವರು, ಕೆ.ಬಿ. ಚಂದ್ರಚೂಡ, ಮಹಿಳಾ ಕಾರಾ ಗೃಹದ ಅಧೀಕ್ಷಕಿ ಆರ್.ಲತಾ, ಸಿ.ಎನ್.ಸುಗುಣಾದೇವಿ ಇದ್ದರು. ಸಾಧಕಿಯರನ್ನು ಸನ್ಮಾನಿಸಲಾಯಿತು. ಸುನಂದಮ್ಮ ನಿರೂಪಿಸಿದರು. ಪ್ರೊ.ಅನುರಾಧಾ ವಂದಿಸಿದರು.
ಕಿವುಡರ ಸಂಘ
ತುಮಕೂರು: ಜಿಲ್ಲಾ ಕಿವುಡರ ಸಂಘದ ವತಿಯಿಂದ ನಗರದ ಭಾರತಮಾತಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಹಿಳಾ ದಿನವನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ರಂಗೋಲಿ ಸ್ಪರ್ಧೆಯಲ್ಲಿ ಗಂಗಲಕ್ಷ್ಮಮ್ಮ (ಪ್ರಥಮ), ಗಂಗರತ್ನಮ್ಮ
(ದ್ವಿತೀಯ) ಮತ್ತು ಪಿ.ಹರ್ಷಿತಾ (ತೃತೀಯ) ಬಹುಮಾನಗಳನ್ನು ಪಡೆದುಕೊಂಡರು. ಪೇಪರ್ ಬಾಲ್ಗಳನ್ನು ಕಪ್ಗಳಿಗೆ ಹಾಕುವ ಸ್ಪರ್ಧೆಯಲ್ಲಿ ತಯಬಾ ನಸೀಮ್ (ಪ್ರಥಮ), ನಗ್ಮಾ (ದ್ವಿತೀಯ) ಮತ್ತು ಸುಜಾತಾ (ತೃತೀಯ) ಬಹುಮಾನಗಳನ್ನು ಪಡೆದುಕೊಂಡರು.
ಭಾರತಮಾತಾ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯದರ್ಶಿ ಜಿ.ಎಸ್.ಸೋಮಶೇಖರ್, ಜಿ.ಟಿ.ಸುದೀರ್, ವಿ.ಕುಮಾರ್, ಸುಜಾತಾ ನಟರಾಜ್ ಇದ್ದರು.