ಶಿರಾಳಕೊಪ್ಪ: ಪಟ್ಟಣದಲ್ಲಿ ಬೀದಿನಾಯಿ ನಿಯಂತ್ರಣಕ್ಕೆ ಆದ್ಯತೆ ನೀಡಲಾಗುವುದು. ಈಗಾಗಲೇ ಬೀದಿನಾಯಿ ಹಿಡಿಯುವ ಪರಿಣತರನ್ನು ಸಂಪರ್ಕಿಸಲಾಗಿದ್ದು, ಶೀಘ್ರವೇ ಕಾರ್ಯಾಚರಣೆ ಆರಂಭಿಸುವುದಾಗಿ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಸುರೇಶ್ ತಿಳಿಸಿದರು.
ಬೀದಿನಾಯಿಗಳ ಪಿಡುಗನ್ನು ನಿಯಂತ್ರಿಸುವಂತೆ ಜೆಡಿಎಸ್ ಟೌನ್ ಅಧ್ಯಕ್ಷ ಬೆಲವಂತನಕೊಪ್ಪ ರಾಘವೇಂದ್ರ ಸೋಮವಾರ ನೀಡಿದ ಮನವಿ ಸ್ವೀಕರಿಸಿ ಅವರು ಮಾತನಾಡಿದರು.
ತ್ಯಾಜ್ಯಗಳನ್ನು ಹೊರಗೆ ಬಿಸಾಡದಂತೆ ಮಾಂಸದ ಅಂಗಡಿಗಳಿಗೆ ಪಟ್ಟಣ ಪಂಚಾಯ್ತಿಯಿಂದ ಹಲವು ಬಾರಿ ಸೂಚಿಸಿದ್ದರೂ ಅಂಗಡಿ ಮಾಲೀಕರು ಸ್ಪಂದಿಸುತ್ತಿಲ್ಲ. ಹೀಗಾಗಿ ಅವರ ವಿರುದ್ಧ ಶೀಘ್ರವೇ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ನಾಯಿ ಕಡಿತಕ್ಕೆ ಒಳಗಾಗಿದ್ದ ಲಕ್ಷ್ಮಣ ಕಲಾಲ್ ಅವರ ಮನೆಗೆ ತಾಲ್ಲೂಕು ವೈದ್ಯಾಧಿಕಾರಿ ಮಂಜುನಾಥ ನಾಗಲೀಕರ ಭೇಟಿ ನೀಡಿದರು. ನಂತರ ಪಟ್ಟಣ ಪಂಚಾಯ್ತಿ ಕಚೇರಿಯಲ್ಲಿ ಮುಖ್ಯಾಧಿಕಾರಿ ಜೊತೆ ಪ್ರಕರಣದ ಬಗ್ಗೆ ಚರ್ಚಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯ್ತಿ ಸದಸ್ಯ ಪಿ.ಜಾಫರ್, ಬೆಲವಂತನಕೊಪ್ಪ ರಾಘವೇಂದ್ರ, ಯುವ ಘಟಕದ ರವಿ, ಗಂಗಾಧರ್, ವಸಂತ ಉಪಸ್ಥಿತರಿದ್ದರು.