ನವದೆಹಲಿ: 2025ರೊಳಗೆ ಕ್ಷಯ ಮುಕ್ತ ಭಾರತ ನಿರ್ಮಾಣ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಚಾಲನೆ ನೀಡಿದರು.
ಜಾಗತಿಕವಾಗಿ ಕ್ಷಯ ರೋಗ ನಿರ್ಮೂಲನೆಗೆ 2030ರ ಗುರಿ ನಿಗದಿಯಾಗಿದೆ. ಅದಕ್ಕಿಂತಲೂ ಐದು ವರ್ಷ ಮುನ್ನವೇ ಭಾರತವನ್ನು ಕ್ಷಯ ರೋಗ ಮುಕ್ತಗೊಳಿಸುವ ಗುರಿ ಹೊಂದಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು.
ದೇಶದಿಂದ ಕ್ಷಯ ನಿರ್ಮೂಲನೆಯಲ್ಲಿ ರಾಜ್ಯ ಸರ್ಕಾರಗಳ ಪಾತ್ರ ಮಹತ್ತರವಾದುದು. ಈ ಕಾರ್ಯದಲ್ಲಿ ಕೈಜೋಡಿಸುವಂತೆ ಎಲ್ಲ ಮುಖ್ಯಮಂತ್ರಿಗಳಿಗೂ ಪತ್ರ ಬರೆದಿದ್ದೇನೆ ಎಂದರು.
ಬಹುಬೇಗ ಹರಡಬಹುದಾದ ಕ್ಷಯ ರೋಗದಿಂದ ಬಡ ಜನರು ಅತಿ ಹೆಚ್ಚು ಸಂಕಷ್ಟಕ್ಕೆ ಸಿಲುಕಿದ್ದಾರೆ. ತಜ್ಞ ವೈದ್ಯರು ಕ್ಷಯ ನಿರ್ಮೂಲನೆಯಲ್ಲಿ ಬಹುಮುಖ್ಯ ಕೊಡುಗೆ ನೀಡಬಹುದಾಗಿದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟರು.
ಕ್ಷಯ ರೋಗ ನಿರ್ಮೂಲನೆ ಕುರಿತಾದ ದೆಹಲಿಯಲ್ಲಿನ ಸಭೆಯಲ್ಲಿ ಪ್ರಧಾನಿ ಮೋದಿ ಮಾತನಾಡಿದರು.
ಪ್ರತಿ ವರ್ಷ ಅಂದಾಜು 1 ಕೋಟಿ ಜನರು ಕ್ಷಯ ರೋಗಕ್ಕೆ ಒಳಗಾಗುತ್ತಿದ್ದಾರೆ. 2016ರಲ್ಲಿ ಕ್ಷಯ ರೋಗದಿಂದ 17 ಲಕ್ಷ ಜನ ಮೃತಪಟ್ಟಿದ್ದಾರೆ.