ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಯಮ ಮೀರಿ ಸಂದರ್ಶನ

Last Updated 13 ಮಾರ್ಚ್ 2018, 19:47 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭೆ ಸಚಿವಾಲಯದ 151 ಹುದ್ದೆಗಳ ನೇಮಕಾತಿಗಾಗಿ ನಡೆದ ಸಂದರ್ಶನ ಪ್ರಕ್ರಿಯೆಯಲ್ಲೂ ನಿಯಮಗಳನ್ನು ಗಾಳಿಗೆ ತೂರಲಾಗಿದೆ.

ಅಭ್ಯರ್ಥಿಗಳ ಸಂದರ್ಶನಕ್ಕೆ ಹಿರಿಯ ಅಧಿಕಾರಿಗಳನ್ನು ಒಳಗೊಂಡ ಸಂದರ್ಶನ ಸಮಿತಿ ರಚಿಸದೇ ಸೆಕ್ಷನ್ ಅಧಿಕಾರಿ, ಅಧೀನ ಕಾರ್ಯದರ್ಶಿ ಮತ್ತು ಕಂಪ್ಯೂಟರ್ ಆಪರೇಟರ್‌ಗಳನ್ನು ಬಳಸಿಕೊಂಡು ‘ಸಂದರ್ಶನ ಶಾಸ್ತ್ರ’ ಮುಗಿಸಿ ಪಟ್ಟಿ ತಯಾರಿಸಲಾಗಿದೆ. ಸಂದರ್ಶನ ಸಮಿತಿಯಲ್ಲಿರುವ ಕೆಲವರ ವಿದ್ಯಾರ್ಹತೆ ಕಾನೂನು ಪದವಿ ಆಗಿದ್ದರೆ, ಕೆಲವರದ್ದು ಎಸ್‌ಎಸ್‌ಎಲ್‌ಸಿ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

ಫೆಬ್ರುವರಿ 23 ರಿಂದ 25 ರವರೆಗೆ ವಿಧಾನಸೌಧ, ಶಾಸಕರ ಭವನದಲ್ಲಿ ಸಂದರ್ಶನ ನಡೆಯಿತು. ಸಂದರ್ಶನ ಪ್ರಕ್ರಿಯೆ ನಡೆಸಿದವರಿಗೆ ಸಮಿತಿಯಲ್ಲಿರುವ ಅರ್ಹತೆಯೇ ಇರಲಿಲ್ಲ. ಸಮಿತಿಯಲ್ಲಿದ್ದವರು ಹೆಸರು ನೋಡಿದರೆ ನೇಮಕಾತಿಗಳು ಯಾವ ರೀತಿ ನಡೆದಿರಬಹುದು ಎಂಬುದು ಸ್ಪಷ್ಟವಾಗುತ್ತದೆ. ಅಚ್ಚರಿಯ ಮತ್ತೊಂದು ಸಂಗತಿ ಎಂದರೆ ಚಾಲಕರ ಹುದ್ದೆಗಳಿಗೆ ಸಚಿವಾಲಯದ ಚಾಲಕರೇ ಚಾಲನ ಪರೀಕ್ಷೆ ನಡೆಸಿದ್ದಾರೆ. ಹೆಸರಿಗೆ ಮಾತ್ರವೇ ಪ್ರಾದೇಶಿಕ ಸಾರಿಗೆ ಕಚೇರಿಯಿಂದ ಒಬ್ಬರು ಬ್ರೇಕ್‌ ಇನ್ಸ್‌‍ಪೆಕ್ಟರ್‌ ಕರೆಸ
ಲಾಗಿತ್ತು ಎಂದೂ ಮೂಲಗಳು ಹೇಳಿವೆ.

ಸಂದರ್ಶನ ಸಮಿತಿ: ಸಚಿವಾಲಯ ಜಂಟಿ ಕಾರ್ಯದರ್ಶಿ ಮಲ್ಲಪ್ಪ ಕಾಳೆ, ಅಧೀನ ಕಾರ್ಯದರ್ಶಿ ಕೆ.ವಿ.ಮುದ್ದಯ್ಯ, ಸೆಕ್ಷನ್‌ ಅಧಿಕಾರಿ ರಾಮಕೃಷ್ಣ ಮತ್ತು ಕಂಪ್ಯೂಟರ್‌ ಡೇಟಾ ಎಂಟ್ರಿ ಆಪರೇಟರ್‌ ಎಂ.ಎಂ.ಆಶಾ, ದಲಾಯತ್‌ ಮತ್ತು ಸ್ವೀಪರ್‌ ಹುದ್ದೆ ಬಿಟ್ಟು ಇತರ ಹುದ್ದೆಗಳಿಗೆ ಸಂದರ್ಶನ ನಡೆಸಲು  ಜಂಟಿ ಕಾರ್ಯದರ್ಶಿ ಮತ್ತು ಆಡಳಿತ ವಿಭಾಗಕ್ಕೆ ಸೇರಿದ ಉನ್ನತಾಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಬೇಕು. ಈ ಸಮಿತಿಯೇ ಸಂದರ್ಶನಗಳನ್ನು ನಡೆಸಬೇಕು.

ಆರಂಭದಲ್ಲಿ ಹೆಸರಿಗಷ್ಟೇ ಉನ್ನತ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಲಾಯಿತು. ಅವರನ್ನು ಸಂದರ್ಶನ ಪ್ರಕ್ರಿಯೆಗೆ ಬಳಸಿಕೊಳ್ಳಲಿಲ್ಲ. ಸರ್ಕಾರದ ನೇಮಕಾತಿ ನಿಯಮಗಳ ಪ್ರಕಾರ, ಸಮಿತಿಯು ಪ್ರತಿ ದಿನ ಸಂದರ್ಶನ ಮುಗಿಸಿದ ಬಳಿಕ ಸಂದರ್ಶನಕ್ಕೆ ಹಾಜರಾದವರ ಹೆಸರು, ಪಡೆದ ಅಂಕಗಳನ್ನು ನೋಟಿಸ್‌ ಬೋರ್ಡ್‌ನಲ್ಲಿ ಪ್ರದರ್ಶಿಸಬೇಕು.

ನೇಮಕಾತಿಗೂ ನಮಗೂ ಸಂಬಂಧವಿಲ್ಲ: ಸಿ.ಎಂ
ರಾಣೆಬೆನ್ನೂರು: ‘ವಿಧಾನಸೌಧ ಸಚಿವಾಲಯದ ನೇಮಕಾತಿಗೂ ನಮಗೂ ಸಂಬಂಧವಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಇಲ್ಲಿ ಪ್ರತಿಕ್ರಿಯಿಸಿದರು.

ವಿಧಾನಸೌಧ ಸಚಿವಾಲಯ ನೇಮಕದಲ್ಲಿ ಸ್ವಜನಪಕ್ಷಪಾತ ಆರೋಪದ ಕುರಿತ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘ಹಾಗೇನೂ ಇಲ್ಲ. ಅಲ್ಲಿ ಪ್ರತ್ಯೇಕ ಕಾರ್ಯದರ್ಶಿಗಳು ಇರುತ್ತಾರೆ’ ಎಂದರು.

‘ವಿಧಾನಸೌಧ ಸಚಿವಾಲಯದ ಸಿಬ್ಬಂದಿ ನೇಮಕಾತಿಯಲ್ಲಿ ಸರ್ಕಾರದ ಹಸ್ತಕ್ಷೇಪವಾಗಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದಾವಣಗೆರೆಯಲ್ಲಿ ಹೇಳಿದರು.

ಮಾಧ್ಯಮದವರ ಜತೆ ಅವರು ಮಾತನಾಡಿ, ‘ನೇಮಕಾತಿ ಪ್ರಕ್ರಿಯೆ ಕಾರ್ಯಾಂಗದ ವ್ಯಾಪ್ತಿಗೆ ಒಳಪಟ್ಟಿದೆ. ಐಪಿಎಸ್‌ ಅಧಿಕಾರಿಗಳ ವರ್ಗಾವಣೆ ಆಡಳಿತಾತ್ಮಕ ವಿಚಾರ. ಅದನ್ನು ಬಹಿರಂಗವಾಗಿ ಚರ್ಚಿಸಲು ಸಾಧ್ಯವಿಲ್ಲ. ಯಾರಿಗಾದರೂ ಅನ್ಯಾಯವಾಗಿದ್ದರೆ ನ್ಯಾಯಾಲಯದ ಮೊರೆ ಹೋಗಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT