ಬೆಂಗಳೂರು: ಬ್ಯಾಂಕ್ ಆಫ್ ಬರೋಡಾದ ಆರ್ಎಂಸಿ ಯಾರ್ಡ್ ಶಾಖೆಗೆ ವಂಚಿಸಿದ್ದ ಆರೋಪದಡಿ ಜೈಲು ಸೇರಿರುವ ನಟಿ ಸಿಂಧೂ ಮೆನನ್ ಅಣ್ಣ ಕೆ.ವಿ.ಮನೋಜ್ (30) ವಿರುದ್ಧ ವಿಜಯಾ ಬ್ಯಾಂಕ್ ಅಧಿಕಾರಿಗಳು ಸಹ ದೂರು ನೀಡಿದ್ದಾರೆ.
ನಕಲಿ ದಾಖಲೆಗಳನ್ನು ಕೊಟ್ಟು ₹35 ಲಕ್ಷ ಸಾಲ ಪಡೆದಿದ್ದ ಮನೋಜ್, ವಾಪಸ್ ಕಟ್ಟಿಲ್ಲ ಎಂದು ಅಧಿಕಾರಿಗಳು ದೂರಿದ್ದಾರೆ. ಸಂಜಯನಗರ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಆತನ ವಿರುದ್ಧ ದಾಖಲಾದ ಮೂರನೇ ಪ್ರಕರಣ ಇದಾಗಿದೆ.
‘ನವನೀತ್ ಮೋಟಾರ್ಸ್ ವರ್ಕ್ಸ್ ಕಂಪನಿ ಹೆಸರಿನಲ್ಲಿ ದಾಖಲೆಗಳನ್ನು ಸೃಷ್ಟಿಸಿದ್ದ ಆರೋಪಿ, ಅವುಗಳನ್ನು ಬಳಸಿ ಖಾತೆ ತೆರೆದಿದ್ದ. ನಂತರ, ಕಾರು ಖರೀದಿಸುವುದಾಗಿ ಸಾಲಕ್ಕೆ ಅರ್ಜಿ ಸಲ್ಲಿಸಿದ್ದ. ಅದನ್ನು ಪರಿಶೀಲಿಸಿದ್ದ ಬ್ಯಾಂಕ್ ಅಧಿಕಾರಿಗಳು, ಸಾಲ ಮಂಜೂರು ಮಾಡಿದ್ದರು’ ಎಂದು ಪೊಲೀಸರು ತಿಳಿಸಿದರು.