ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3 ತಿಂಗಳಲ್ಲಿ ಕರಗಡ ಯೋಜನೆ ಪೂರ್ಣ

ಜೆಡಿಎಸ್ ಅಧಿಕಾರಕ್ಕೆ: ಮಾಜಿ ಶಾಸಕ ಎಸ್‌.ಎಲ್‌.ಧರ್ಮೇಗೌಡ ವಿಶ್ವಾಸ
Last Updated 14 ಮಾರ್ಚ್ 2018, 8:29 IST
ಅಕ್ಷರ ಗಾತ್ರ

ಕಡೂರು: ‘ಚಿಕ್ಕಮಗಳೂರಿನಲ್ಲಿ ಈ ಬಾರಿ ಜೆಡಿಎಸ್ ಅಭ್ಯರ್ಥಿ ಗೆಲುವು ಸಾಧಿಸಿ, ಕುಮಾರಸ್ವಾಮಿಯವರು ರಾಜ್ಯದ ಮುಖ್ಯಮಂತ್ರಿಯಾದರೆ ಕೇವಲ ಮೂರು ತಿಂಗಳಿನಲ್ಲಿ ಕರಗಡ ಕುಡಿಯುವ ನೀರಿನ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು’ ಎಂದು ಮಾಜಿ ಶಾಸಕ ಎಸ್.ಎಲ್.ಧರ್ಮೇಗೌಡ ಭರವಸೆ ನೀಡಿದರು.

ಕಡೂರು ತಾಲ್ಲೂಕಿನ ಸಖರಾಯಪಟ್ಟಣದಲ್ಲಿ ಮಂಗಳವಾರ ನಡೆದ ಬಯಲು ಸೀಮೆ ಭಾಗದ ಸಖರಾಯಪಟ್ಟಣ ಮತ್ತು ಲಕ್ಯಾ ಕ್ಷೇತ್ರದ ಜೆ ಡಿಎಸ್ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕರಗಡ ಕುಡಿಯುವ ನೀರಿನ ಯೋಜನೆಗೆ ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಮನವೊಲಿಸಿ ₹3.50 ಕೋಟಿ ತಂದು ಕಾಮಗಾರಿಗೆ ಚಾಲನೆ ಕೊಟ್ಟಿದ್ದು ನನ್ನ ಪ್ರಯತ್ನದ ಫಲ. ನಮ್ಮ ತಂದೆ ಲಕ್ಷ್ಮಯ್ಯನವರು ಚುನಾವಣೆಗೆ ಸ್ಪರ್ಧಿಸಿದ್ದಾಗ ಅವರು ಆಯ್ಕೆಯಾ
ಗುವುದಿಲ್ಲ ಎಂದಿದ್ದವರೇ ನಾನು ಚುನಾವಣೆಗೆ ಸ್ಪರ್ಧಿಸಿದ್ದಾಗ ಅದೇ ರೀತಿ ವ್ಯಂಗ್ಯವಾಡಿದ್ದರು. ಆದರೂ ಜನರ ಪ್ರೀತಿಯಂದ ನಾನು ಆಯ್ಕೆಯಾದೆ’ ಎಂದರು.

ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ ರೈತರ ಸಾಲ ಮನ್ನಾ ಮಾಡುವುದರೊಂದಿಗೆ ಅಯ್ಯನಕೆರೆ, ಬುಕ್ಕಸಾಗರ ಕೆರೆ ಸೇರಿದಂತೆ ಇನ್ನುಳಿದ ಎಲ್ಲ ಕೆರೆಗಳನ್ನು ತುಂಬಿಸಲಾಗುವುದು. ಬೆಣ್ಣೆ ಮಾತನ್ನಾಡಿ ಜನರನ್ನು ಮರಳು ಮಾಡುವ ಇಲ್ಲಿನ ಶಾಸಕರು 3 ಬಾರಿ ಶಾಸಕರಾಗಿ ಮಾಡಿರುವ ಸಾಧನೆ ಏನು? ನನ್ನ ಕಾಲದಲ್ಲಾಗಿರುವ ಕಾರ್ಯಗಳನ್ನು ಜನರು ಮರೆತಿಲ್ಲ’ ಎಂದರು.

ಪಕ್ಷದ ರಾಜ್ಯ ಘಟಕದ ಉಪಾದ್ಯಕ್ಷ ಎಚ್‌.ಎಚ್.ದೇವರಾಜ್ ಮಾತನಾಡಿ ‘ಕರಗಡ ಕುಡಿಯುವ ನೀರಿನ ಯೋಜನೆ ಕಾಮಗಾರಿಯಲ್ಲಿ ಕ್ಷುಲ್ಲಕ ರಾಜಕಾರಣ ಮತ್ತು ಹಣ ಹೊಡೆಯುವ ಮೂಲಕ ಕಾಂಗ್ರೇಸ್, ಬಿಜೆಪಿ ಶಾಸಕರು ಬಯಲು ಸೀಮೆಯ ಜನರಿಗೆ ದ್ರೋಹ ಬಗೆದಿದ್ದಾರೆ’ ಎಂದು ಆರೋಪಿಸಿದರು.

‘ಕಬಡ್ಡಿ ಆಡುತ್ತಲೇ ಸಮಯ ಕಳೆದ ಶಾಸಕ ಸಿ.ಟಿ. ರವಿಯವರಿಗೆ ಇದೀಗ ಯಡಿಯೂರಪ್ಪ ನೆನಪಾಗಿದ್ದಾರೆ. ಅದಕ್ಕಾಗಿ ಅನಂತಕುಮಾರ್ ಭಾವಚಿತ್ರವನ್ನು ಬಿಟ್ಟು ಯಡಿಯೂರಪ್ಪನವರ ಭಾವ ಚಿತ್ರವನ್ನು ಹಾಕುತ್ತಿದ್ದಾರೆ’ ಎಂದು ಟೀಕಿಸಿದರು.

ಪಕ್ಷದ ನಿಯೋಜಿತ ಅಭ್ಯರ್ಥಿ ಬಿ.ಎಚ್.ಹರೀಶ್ ಮಾತನಾಡಿ ‘ಮೂರು ಬಾರಿ ಬಿಜೆಪಿ ಆಡಳಿತವನ್ನು ನೋಡಿದ್ದೀರಿ, ಬದಲಾವಣೆಗೆ ಮನಸ್ಸು ಮಾಡಿ, ಜೆಡಿಎಸ್‌ಗೆ ಮತ ನೀಡುವ ಮೂಲಕ ಅಭಿವೃದ್ಧಿ ರಾಜಕಾರಣಕ್ಕೆ ನಾಂದಿ ಹಾಡಬೇಕು’ ಎಂದು ಮನವಿ ಮಾಡಿದರು.

ಮುಖಂಡರಾದ ಭೈರೇಗೌಡ, ಎಂ.ಡಿ.ರಮೇಶ್, ಜಯರಾಜ ಅರಸ್, ಡಿ.ಕೆ.ಚಂದ್ರೇಗೌಡ, ಸಿ.ಕೆ.ಮೂರ್ತಿ, ಚಿದಾನಂದ್, ದಿನೇಶ್, ಕೋಟೆ ವಿನಯ್, ನಿಸ್ಸಾರ್ ಅಹಮದ್, ಲಕ್ಷ್ಮಣ್, ಆರ್.ದೇವಿ ಪ್ರಸಾದ್, ತಾಲ್ಲೂಕು ಪಂಚಾಯ್ತಿ ಸದಸ್ಯ ಆನಂದ ನಾಯ್ಕ, ಗ್ರಾಮ ಪಂಚಾಯ್ತಿ ಅದ್ಯಕ್ಷ ಯೋಗೀಂದ್ರ, ಉಪಾಧ್ಯಕ್ಷೆ ಇಂದಿರಾಬಾಯಿ, ರಾಜಮ್ಮ, ದಾಕ್ಷಾಯಿಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT