ನವದೆಹಲಿ: ಅಯೋಧ್ಯೆಯ ಬಾಬರಿ ಮಸೀದಿ-ರಾಮ ಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಎಲ್ಲ ಮಧ್ಯಂತರ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಬುಧವಾರ ವಜಾ ಮಾಡಿದೆ.
ಪ್ರಕರಣದಲ್ಲಿ ತಮ್ಮನ್ನೂ ಸೇರಿಸಿಕೊಂಡು ವಾದ ಆಲಿಸುವಂತೆ ಕೋರಿ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಸೇರಿದಂತೆ ಹಲವು ಮಂದಿ ಮಧ್ಯಂತರ ಅರ್ಜಿ ಸಲ್ಲಿಸಿದ್ದರು.
‘ಮೂಲ ಅರ್ಜಿಯಲ್ಲಿ ಇರುವ ವಾದಿ–ಪ್ರತಿವಾದಿಗಳು ಮಾತ್ರ ತಮ್ಮ ವಾದವನ್ನು ಮಂಡನೆ ಮಾಡಬಹುದು. ಅವರನ್ನು ಬಿಟ್ಟು ತಮ್ಮನ್ನೂ ಸೇರ್ಪಡೆ ಮಾಡುವಂತೆ ಯಾರೇ ಕೋರಿದರೂ ಅದನ್ನು ಮಾನ್ಯ ಮಾಡಲಾಗದು’ ಎಂದು ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ವಿಶೇಷ ಪೀಠ ಹೇಳಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸ್ವಾಮಿ, ‘ಪೂಜೆ ಮಾಡುವುದು ನನ್ನ ಮೂಲ ಹಕ್ಕು. ಆಸ್ತಿಯ ಹಕ್ಕಿಗಿಂತ ಈ ಹಕ್ಕು ದೊಡ್ಡದು. ಆದ್ದರಿಂದ ನನ್ನ ವಾದವನ್ನೂ ಆಲಿಸುವಂತೆ ಕೋರಿ ಮಧ್ಯಂತರ ಅರ್ಜಿ ಸಲ್ಲಿಸಿದ್ದೆ’ ಎಂದಿದ್ದಾರೆ.
2010ರಲ್ಲಿ ಅಲಹಾಬಾದ್ ಹೈಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ವಿಶೇಷ ಪೀಠ ನಡೆಸುತ್ತಿದೆ.