ಇದೇ 21 ಮತ್ತು 22ರಂದು ಕರಾವಳಿ ಭಾಗದಲ್ಲಿ, 24, 25ರಂದು ಮೈಸೂರು ಭಾಗದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರವಾಸ ಕೈಗೊಳ್ಳಲಿದ್ದಾರೆ. ಹೈದರಾಬಾದ್–ಕರ್ನಾಟಕ ಹಾಗೂ ಮುಂಬೈ–ಕರ್ನಾಟಕ ಭಾಗದಲ್ಲಿ ರಾಹುಲ್ ಪ್ರವಾಸ ಯಶಸ್ವಿಯಾಗಿದೆ. ಆದರೆ, ಕರಾವಳಿ ಭಾಗದಲ್ಲಿ ಬಿಜೆಪಿ ಪ್ರಾಬಲ್ಯ ಹೊಂದಿದ್ದು, ಕೋಮುಸೂಕ್ಷ್ಮ ಪ್ರದೇಶವೂ ಆಗಿದೆ. ಈ ಭಾಗದಲ್ಲಿ ಪ್ರವಾಸ ಯಶಸ್ವಿಗೊಳಿಸಲು ಈ ಭಾಗದ ನಾಯಕರು ಸಿದ್ಧತೆ ಮಾಡಿಕೊಳ್ಳಬೇಕು. ಹೀಗಾಗಿ, ದೆಹಲಿಯಲ್ಲಿ ನಡೆಯಲಿರುವ ಎಐಸಿಸಿ ಅಧಿವೇಶನಕ್ಕೆ ಇಲ್ಲಿನ ನಾಯಕರು ಹಾಜರಾಗುವ ಅಗತ್ಯ ಇಲ್ಲ ಎಂದೂ ಸೂಚನೆ ನೀಡಲಾಗಿದೆ.