ಹಾಸನ: ಛತ್ತೀಸಗಡದ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲ್ ದಾಳಿಯಲ್ಲಿ ಹುತಾತ್ಮರಾದ ಯೋಧ ಎಚ್.ಎಸ್.ಚಂದ್ರ ಅವರ ಪಾರ್ಥಿವ ಶರೀರದ ಅಂತಿಮ ಯಾತ್ರೆ ವೇಳೆ ಜನಪ್ರತಿನಿಧಿಗಳು, ಅಧಿಕಾರಿಗಳು ಅಗೌರವ ಸಲ್ಲಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಬಿಕಾರಿ ರೀತಿಯಲ್ಲಿ ಪಾರ್ಥಿವ ಶರೀರ ಕೊಂಡೊಯ್ಯಲಾಗುತ್ತಿದೆ ಎಂದು ಆರೋಪಿಸಿರುವ ಗ್ರಾಮಸ್ಥರು ಚಂದ್ರ ಅವರ ಕುಟುಂಬದವರ ಜತೆ ಸೇರಿ ಹಾಸನ ಜಿಲ್ಲಾಸ್ಪತ್ರೆ ಎದುರು ದಿಢೀರ್ ಪ್ರತಿಭಟನೆ ನಡೆಸಿದ್ದಾರೆ.
‘ಒಂದೋ ಗೌರವದಿಂದ ಅಂತ್ಯಸಂಸ್ಕಾರ ಮಾಡಿ, ಇಲ್ಲವೇ ಪಾರ್ಥಿವ ಶರೀರ ನಮಗೆ ಕೊಡಿ. ನಾವೇ ಮಣ್ಣು ಮಾಡುತ್ತೇವೆ’ ಎಂದು ಪ್ರತಿಭಟನಾನಿರತರು ಪಟ್ಟು ಹಿಡಿದಿದ್ದಾರೆ. ಅಲ್ಲದೆ, ಜಿಲ್ಲಾಸ್ಪತ್ರೆಯಿಂದ ಮೃತದೇಹವನ್ನು ಮುಂದಕ್ಕೆ ಕೊಂಡೊಯ್ಯಲೂ ಅವಕಾಶ ನೀಡಿಲ್ಲ.
ಅಂತಿಮ ದರ್ಶನಕ್ಕೆ ತರಾತುರಿ ವ್ಯವಸ್ಥೆ: ಗ್ರಾಮಸ್ಥರು ಮತ್ತು ಯೋಧನ ಕುಟುಂಬದವರು ಪ್ರತಿಭಟನೆ ನಡೆಸುತ್ತಿದ್ದಂತೆಯೇ ಚಂದ್ರ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಜಿಲ್ಲಾಡಳಿತ ತರಾತುರಿಯ ಸಿದ್ಧತೆ ನಡೆಸಿದೆ. ಹಾಸನದ ಜಿಲ್ಲಾಧಿಕಾರಿ ಕಚೇರಿ ಎದುರು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಈ ಮಧ್ಯೆ, ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಚಂದ್ರ ಅವರ ಪತ್ನಿ ಪೃಥ್ವಿ ಆಗಮಿಸಿದ್ದಾರೆ. 8 ತಿಂಗಳ ಗರ್ಭಿಣಿಯಾಗಿರುವುದರಿಂದ ಬುಧವಾರದವರೆಗೆ ಅವರಿಗೆ ಚಂದ್ರ ಅವರ ಸಾವಿನ ಸುದ್ದಿ ತಿಳಿಸಿರಲಿಲ್ಲ.
ಹುಟ್ಟೂರಿನತ್ತ ಪಾರ್ಥಿವ ಶರೀರ: ಹಾಸನದಲ್ಲಿ ಅಂತಿಮ ದರ್ಶನ ಮುಕ್ತಾಯವಾದ ನಂತರ ಪಾರ್ಥಿವ ಶರೀರವನ್ನು ಹುಟ್ಟೂರು ಅರಕಲಗೂಡಿನತ್ತ ಸಿಆರ್ಪಿಎಫ್ ವಾಹನದಲ್ಲಿ ಕೊಂಡೊಯ್ಯಲಾಗುತ್ತಿದೆ. ಅಲ್ಲಿ 2 ಗಂಟೆ ಕಾಲ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, ನಂತರ ಅಂತ್ಯಕ್ರಿಯೆ ನೆರವೇರಲಿದೆ.