ಬಂಗಾರಪೇಟೆ: ತಾಲ್ಲೂಕಿನ ಪಂಚಾಯಿತಿಗಳಲ್ಲಿ ನಡೆಯುತ್ತಿರುವ ಅವ್ಯವಹಾರ ತಡೆದು, ಸರ್ವಾಧಿಕಾರಿಗಳಂತೆ ವರ್ತಿಸುತ್ತಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘಟನೆ ಸದಸ್ಯರು ತಾಲ್ಲೂಕು ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸಿದರು.
14ನೇ ಹಣಕಾಸಿನ ಯೋಜನೆಯಡಿ ಪಂಚಾಯಿತಿಗಳಿಗೆ ಬಿಡುಗಡೆಯಾದ ಅನುದಾನ ಅಧಿಕಾರಿಗಳ ಮತ್ತು ಗುತ್ತಿಗೆದಾರರ ಪಾಲಾಗುತ್ತಿದೆ. ದುಡಿಯುವವರಿಗೆ ಕೆಲಸ ನೀಡದ ಅಧಿಕಾರಿಗಳು ಯಂತ್ರಗಳಿಂದ ಕೆಲಸ ಮಾಡಿಸುತ್ತಿದ್ದಾರೆ ಎಂದು ದೂರಿದರು.
ರಾಜ್ಯ ಘಟಕ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, "ಹಳ್ಳಿ ಜನರನ್ನು ವಂಚಿಸಿ ಜಾಬ್ ಕಾರ್ಡ್ ಮಾಡಿಸಿ ಅಧಿಕಾರಿಗಳು ಹಣ ಲೂಟಿ ಮಾಡಿದ್ದಾರೆ. ಹಳ್ಳಿಗಳಲ್ಲಿ ದನದ ಕೊಟ್ಟಿಗೆ, ಶೌಚಾಲಯಕ್ಕೆ ಅನುದಾನ ಬಿಡುಗಡೆ ಮಾಡದೆ ಸತಾಯಿಸುತ್ತಿದ್ದಾರೆ’ ಎಂದು ದೂರಿದರು.
ಜಿಲ್ಲಾ ಘಟಕ ಅಧ್ಯಕ್ಷ ಮರಗಲ್ ಶ್ರೀನಿವಾಸ್ ಮಾತನಾಡಿ, ‘ಗ್ರಾಮಗಳ ವ್ಯಾಪ್ತಿಯ ಗುಂಡು ತೋಪು, ಖರಾಬು, ಗೋಮಾಳದ ಸರ್ಕಾರಿ ಜಮೀನಿನ ರಕ್ಷಣೆ ಅಧಿಕಾರಿಗಳ ಹೊಣೆ. ಆದರೆ ನಕಲಿ ದಾಖಲೆ, ಇ-ಖಾತೆಗಳನ್ನು ಮಾಡಿಕೊಡುವ ಮೂಲಕ ಸರ್ಕಾರಿ ಜಮೀನು ಕಬಳಿಸಲು ಅನುವು ಮಾಡಿದ್ದಾರೆ’ ಎಂದು ಆರೋಪಿಸಿದರು.