ದಾವಣಗೆರೆ: ‘ಸಾಕಾಗೊಲ್ಲ. ಇನ್ನೂ ಸ್ವಲ್ಪ ಹೆಚ್ಚು ನೀಡಿದರೆ ಅನುಕೂಲವಾಗುತ್ತಿದೆ. ಆದರೂ, ಬಡವರಿಗೆ ಈ ಕ್ಯಾಂಟೀನ್ನಿಂದ ತುಂಬಾ ಅನುಕೂಲವಾಯಿತು’ ಎಂದು ನೂತನವಾಗಿ ಆರಂಭವಾದ ಇಂದಿರಾ ಕ್ಯಾಂಟೀನ್ನಲ್ಲಿ ಬುಧವಾರ ರಾತ್ರಿ ಪುಲಾವ್ ತಿನ್ನುತ್ತಿದ್ದ ಕಟ್ಟಡ ಕಾರ್ಮಿಕ ರಮೇಶ್ ಹೇಳಿದರು.
ಮಧ್ಯಾಹ್ನ ಇಲ್ಲಿಯೇ ಅನ್ನ ಸಾಂಬಾರು, ಮೊಸರನ್ನ ಊಟ ಮಾಡಿದೆ. ಈಗ ₹ 20 ಕೊಟ್ಟು ಎರಡು ಕೂಪನ್ ತೆಗೆದುಕೊಂಡು
ಪುಲಾವ್, ಮೊಸರನ್ನ ಊಟ ಮಾಡಿದ್ದೇನೆ. ತುಂಬಾ ಇಷ್ಟವಾಯಿತು ಎಂದು ಖುಷಿಯಿಂದ ‘ಪ್ರಜಾವಾಣಿ’ಯೊಂದಿಗೆ ಅನಿಸಿಕೆ ಹಂಚಿಕೊಂಡರು.
‘ಆರಂಭದ ದಿನಗಳಲ್ಲಿರುವ ಶುಚಿ, ರುಚಿಯನ್ನು ಮುಂದಿನ ದಿನಗಳಲ್ಲಿಯೂ ಕಾಪಾಡಿಕೊಳ್ಳಬೇಕು. ವಿದ್ಯಾರ್ಥಿಗಳಿಗೆ, ಮಹಿಳೆಯರು ಹಾಗೂ ಮಕ್ಕಳು ಒಳಗೊಂಡಂತೆ ಎಲ್ಲರಿಗೂ ಈ ಕ್ಯಾಂಟೀನ್ ಆರಂಭದಿಂದ ಅನುಕೂಲವಾಗಿದೆ’ ಎಂದು ಕೆ.ಟಿ.ಜೆ ನಗರದ ಚಂದ್ರಮ್ಮ ಹೇಳಿದರು.
ಬೆಳಿಗ್ಗೆ ಸಾವಿರಕ್ಕೂ ಅಧಿಕ ಜನರು ತಿಂಡಿ ತಿನ್ನಲು ಬಂದಿದ್ದರು. ಕೂಪನ್ ಖಾಲಿಯಾದರೂ ಜನರು ಕೂಪನ್ ಕೊಡಿ ಎಂದು ಒತ್ತಾಯಿಸುತ್ತಿದ್ದರು. ಅವರನ್ನು ನಿಯಂತ್ರಿಸುವುದೇ ಕಷ್ಟವಾಯಿತು ಎಂದು ಕ್ಯಾಂಟೀನ್ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಮಲ್ಲೇಶ್ ಬಾಬು ಹೇಳಿದರು.
ಒಂದು ಹೊತ್ತಿಗೆ 500 ಕೂಪನ್ಗಳಂತೆ ಬೆಳಿಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಒಟ್ಟು 1,500 ಕೂಪನ್ಗಳನ್ನು ವಿತರಿಸಲಾಗುತ್ತಿದೆ. ಆದರೂ ಸಾಲುತ್ತಿಲ್ಲ. ನಿತ್ಯ 3 ಸಾವಿರ ಕೂಪನ್ಗಳನ್ನು ವಿತರಿಸಿದರೂ ಜನರು ಬರುತ್ತಾರೆ ಎನ್ನುತ್ತಾರೆ ಅವರು.
ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಪಾಲಿಕೆ ಹಾಗೂ ಶಾಲಾ– ಕಾಲೇಜು ಹತ್ತಿರದಲ್ಲಿಯೇ ಇರುವುದರಿಂದ ಸಾಕಷ್ಟು ಜನರು ಬರುತ್ತಿದ್ದಾರೆ ಎಂದು ಮಾಹಿತಿ ನೀಡಿದರು.