ಗಂಗಾವತಿ: ‘ಸಿಸಿ ರಸ್ತೆ ಕಾಮಗಾರಿ ಕಳಪೆಯೋ, ಗುಣಮಟ್ಟದ್ದೋ ಎಂದು ಕೇಳಲು ನೀವ್ಯಾರು. ನಿಮಗೇನು ಅಧಿಕಾರವಿದೆ’ ಎಂದು ಮಹಿಳೆಯರು ಆಮ್ ಆದ್ಮಿ ಪಕ್ಷದ ಪ್ರಮುಖರನ್ನು ಮಂಗಳವಾರ ಇಲ್ಲಿ ಸಾರ್ವಜನಿಕವಾಗಿ ತರಾಟೆಗೆ ತೆಗೆದುಕೊಂಡರು.
23ನೇ ವಾರ್ಡ್ನ ಅಂಬೇಡ್ಕರ್ ನಗರದಲ್ಲಿ ಪರಿವಾರ ಬೇಕರಿ ಎದುರು ಸಿಸಿ ರಸ್ತೆ ಕಾಮಗಾರಿ ನಡೆಯುತ್ತಿರುವುದನ್ನು ತಿಳಿದು ಸ್ಥಳಕ್ಕೆ ಬಂದ ಆಪ್ ಮುಖಂಡರು, ಕಾಮಗಾರಿಯ ಗುಣಮಟ್ಟದ ಕುರಿತು ತಕರಾರು ತೆಗೆದರು.
ಕಾಮಗಾರಿಯ ಅಂದಾಜು ಪ್ರತಿ ನೀಡುವಂತೆ ಗುತ್ತಿಗೆದಾರ ಸುಬ್ರಹ್ಮಣ್ಯ ಅವರಿಗೆ ಆಪ್ ಮುಖಂಡರು ಕೇಳಿದ್ದು, ಸ್ಥಳೀಯ ಯುವಕರಾದ ಹುಸೇನ್, ರಫಿಕ್, ಮಹೆಬೂಬ ಅವರನ್ನು ಕೆರಳಿಸಿತು. ಆಗ ಎರಡೂ ಗುಂಪುಗಳ ಮಧ್ಯೆ ಮಾತಿಗೆ ಮಾತು ಬೆಳೆದು ಕೈಕೈ ಮಿಲಾಯಿಸುವ ಹಂತಕ್ಕೆ ಹೋಯಿತು.
ಈ ವೇಳೆ ಸ್ಥಳಕ್ಕೆ ಬಂದ ಕೆಲವು ಮಹಿಳೆಯರು ನಮ್ಮ ವಾರ್ಡ್ನಲ್ಲಿ ನಡೆಯುತ್ತಿರುವ ಕೆಲಸದ ಬಗ್ಗೆ ಕೇಳಲು ನೀವು ಯಾರು. ನಿಮಗೇನು ಹಕ್ಕಿದೆ. ನೀವು ನಮ್ಮ ವಾರ್ಡ್ ನಿವಾಸಿಗಳೇ ಎಂದು ಆಕ್ರೋಶ ವ್ಯಕ್ತಪಡಿಸಿದರು.