ಮಂಗಳೂರು: ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಬುಧವಾರ ಸಂಜೆ ಮಳೆಯಾಗಿದೆ. ತಂಪು ಚೆಲ್ಲಿದೆ. ಸುಬ್ರಹ್ಮಣ್ಯ, ಪುತ್ತೂರು, ಬಂಟ್ವಾಳ, ಬಿ.ಸಿ.ರೋಡು, ವಿಟ್ಲ, ಉಳ್ಳಾಲ, ಮೂಡುಬಿದಿರೆ ಮುಂತಾದೆಡೆ ಮಳೆ ಸುರಿದಿದೆ.
ಸುಬ್ರಹ್ಮಣ್ಯದಲ್ಲಿ ಲಘು ಮಳೆ
ಸುಬ್ರಹ್ಮಣ್ಯ: ಸುಬ್ರಹ್ಮಣ್ಯದ ಸುತ್ತಮುತ್ತ ಬುಧವಾರ ಸಂಜೆ ಲಘುವಾದ ಮಳೆ ಯಾಗಿದೆ. ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣವಿದ್ದು, ಬಿಸಿಲಿನ ಝಳದಿಂದ ತತ್ತರಿಸಿದ ಜನಕ್ಕೆ ಮಳೆ ಹಿತ ನೀಡಿತು.
ಜನಜೀವನ ಅಸ್ತವ್ಯಸ್ತ
ವಿಟ್ಲ: ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಸಂಜೆ 5 ಗಂಟೆಗೆ ಪ್ರಾರಂಭಗೊಂಡ ಮಳೆ ರಾತ್ರಿ 6.30ರ ವರೆಗೆ ಮುಂದು ವರೆದಿದೆ. ವಿಟ್ಲ ಪರಿಸರದ ಕನ್ಯಾನ, ಮಾಣಿ, ಅಳಕೆಮಜಲು, ಸಾಲೆತ್ತೂರು, ಪುಣಚ ಮೊದಲಾದ ಕಡೆಗಳಲ್ಲಿ ಮಳೆ ಯಾಗಿದೆ. ವಿಟ್ಲ ಭಾಗದ ಮಹುತೇಕ ಪರಿಸರದಲ್ಲಿ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ.
ರಸ್ತೆಯೆಲ್ಲ ಕೆಸರು
ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಮೇಲುಸೇತುವೆ ಬಳಿ ಆಮೆಗತಿಯಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ಸರ್ವಿಸ್ ರಸ್ತೆ ಕಾಮಗಾರಿ ಸಹಿತ ಬಹುತೇಕ ಗ್ರಾಮೀಣ ರಸ್ತೆಗಳಲ್ಲಿ ಕೂಡಾ ಸೂಕ್ತ ಚರಂಡಿ ಇಲ್ಲದೆ ಬುಧವಾರ ಸಂಜೆ ಸುರಿದ ಮಳೆಗೆ ರಸ್ತೆಯುದ್ದಕ್ಕೂ ಕೆಸರು ನೀರು ಹರಿದಿದೆ. ಸಂಗ್ರಹಗೊಂಡಿದೆ.
ತಾಲ್ಲೂಕಿನ ಹಲವೆಡೆ ಬುಧವಾರ ಸಂಜೆ ಒಂದೆರಡು ಗಂಟೆ ಭಾರಿ ಗಾಳಿ, ಮಿಂಚು ಮತ್ತು ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ. ಕೆಲವು ದಿನಗಳಿಂದ ಬಿಸಿಲಿನ ತಾಪದಿಂದ ಕಂಗೆಟ್ಟಿದ್ದ ಜನತೆಗೆ ವಾತಾವರಣ ತಂಪಾಗಿಸಿದೆ.
ತಾಲ್ಲೂಕಿನ ಕೇಂದ್ರ ಭಾಗ ಬಿ.ಸಿ.ರೋಡಿನಲ್ಲಿ ಕಳೆದ ಒಂದು ವರ್ಷಗ ಳಿಂದ ಸರ್ವಿಸ್ ರಸ್ತೆ ಕಾಂಕ್ರಿಟೀಕರಣ ಮತ್ತು ಚರಂಡಿ ನಿರ್ಮಾಣ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದೆ. ಇದರಿಂ ದಾಗಿ ಬುಧವಾರ ಸಂಜೆ ಚರಂಡಿ ಇಲ್ಲದೆ ರಸ್ತೆಯದ್ದಕ್ಕೂ ಕೆಸರು ಮತ್ತು ಮಳೆನೀರು ತೋಡಿನಂತೆ ಹರಿಯುತ್ತಿತ್ತು.
ಗುಡುಗು ಮಳೆ
ಮೂಡುಬಿದಿರೆ: ಮೂಡುಬಿದಿರೆ ಪರಿಸ ರದಲ್ಲಿ ಬುಧವಾರ ಸಂಜೆ ದಿಢೀರ್ ಮಳೆ ಸುರಿದು ತಂಪಿನ ವಾತಾವರಣ ಮೂಡಿಸಿತು.
ಸಂಜೆ 6 ಗಂಟೆ ಹೊತ್ತಿಗೆ ಗಾಳಿ, ಗುಡುಗು ಸಹಿತ ಮಳೆ ಆರಂಭ ವಾಗಿದೆ. ಮುಕ್ಕಾಲು ಗಂಟೆ ಮಳೆ ಸುರಿದು ಸ್ವಲ್ಪ ಹೊತ್ತು ವಿದ್ಯುತ್ ಸಂಪರ್ಕ ಕಡಿತಗೊಂಡು ಜನಜೀವನ ಅಸ್ತವ್ಯಸ್ಥಗೊಂಡಿತು. ಮೂಡುಬಿದಿರೆ ಪೇಟೆ ಮಾತ್ರವಲ್ಲದೆ ಗ್ರಾಮಾಂತರ ಪ್ರದೇಶದಲ್ಲು ಮಳೆಸುರಿದಿದೆ.
ತುಂತುರು ಮಳೆ
ಉಳ್ಳಾಲ: ಬುಧವಾರ ಸಂಜೆ ಉಳ್ಳಾಲ ವ್ಯಾಪ್ತಿಯಲ್ಲಿ ತುಂತುರು ಮಳೆಯಾಗಿದೆ. ಉಳ್ಳಾಲ, ತೊಕ್ಕೊಟ್ಟು, ತಲಪಾಡಿ, ದೇರಳಕಟ್ಟೆ, ಕುತ್ತಾರು , ಕೊಣಾಜೆ , ಮುಡಿಪು ಭಾಗದಲ್ಲಿ ಸಂಜೆಯಿಂದ ತುಂತುರು ಮಳೆಯಾಗಿದೆ.
ಗುಡುಗಿನೊಂದಿಗೆ ಕೂಡಿದ ತುಂ ತುರು ಮಳೆಯಿಂದಾಗಿ ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರು ಪರದಾಡು ವಂತಾಯಿತು.
ಶಾಲೆಯಿಂದ ಮನೆಗೆ ತೆರಳುವ ವಿದ್ಯಾರ್ಥಿಗಳು, ಕೆಲಸದಿಂದ ಮನೆಗೆ ಹಿಂತಿರುಗುವವರು ಮಳೆ ನೀರಿನಲ್ಲಿ ಒದ್ದೆಯಾಗಿ ಮನೆ ಸೇರಬೇಕಾಯಿತು.
‘ಹವಾಮಾನ ಇಲಾಖೆಯ ಮುನ್ಸೂ ಚನೆ ಪ್ರಕಾರ ಸಮುದ್ರದ ಅಲೆಗಳು ಏರಿಕೆಯಾಗುವ ಸಾಧ್ಯತೆಗಳಿದ್ದರೂ, ಉಳ್ಳಾಲ, ತಲಪಾಡಿ ಭಾಗದಲ್ಲಿ ಸಮುದ್ರದ ಅಲೆಗಳಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ. ರಾತ್ರಿ ವೇಳೆ ಸಮುದ್ರದಲ್ಲಿ ಏರಿಕೆಯಾಗುವ ಸಾಧ್ಯತೆ ಗಳಿವೆ. ಇದರಿಂದ ಆತಂಕಿತರಾಗಿದ್ದೇವೆ’ ಎಂದು ಉಳ್ಳಾಲ ಮೊಗವೀರಪಟ್ಣ ಸುಭಾಷನಗರ ನಿವಾಸಿಗಳು ತಿಳಿಸಿದ್ದಾರೆ.
ಸಂಜೆ 6 ರಿಂದ ಆರಂಭಗೊಂಡಿರುವ ಮಳೆ ಮುಂದುವರಿದಿದ್ದು, ನಗರಸಭೆ ಯಿಂದ ಸಮುದ್ರ ತೀರದ ನಿವಾಸಿಗಳಿಗೆ ಮುನ್ನೆಚ್ಚರಿಕೆ ವಹಿಸಲಾಗಿದೆ.
ತಂಪೆರೆದ ಮಳೆ
ಸುರತ್ಕಲ್: ಬುಧವಾರ ಸಂಜೆ ಅಕಾಲಿಕವಾಗಿ ಸುರಿದ ಮಳೆ ಸುರತ್ಕಲ್ ಪ್ರದೇಶದಲ್ಲಿ ತಂಪೆರದಿದ್ದು ಯಾವುದೇ ಮಳೆ ಹಾನಿ ಸಂಭವಿಸಿಲ್ಲ.
ಗಾಳಿಗೆ ವಿದ್ಯುತ್ ಕೊಟ್ಟಿದ್ದು ಸುರತ್ಕಲ್, ಮುಕ್ಕ, ಚೇಳಾರ್, ಕಾಟಿಪಳ್ಳ ಕೃಷ್ಣಾಪುರ ಪ್ರದೇಶವನ್ನು ಕತ್ತಲಲ್ಲಿ ಹಾಕಿತು.
ಮೊದಲ ಮಳೆಗೆ ರಸ್ತೆ ಒದ್ದೆಯಾದ ಪರಿಣಾಮ ಬೈಕಂಪಾಡಿ ಮತ್ತು ತಡಂಬೈಲ್ ಬಳಿ ಎರಡು ಬೈಕ್ ಸ್ಕಿಡ್ ಆಗಿತ್ತು. ಆದರೆ ಯಾವುದೇ ಹಾನಿ ಸಂಭವಿಸಿಲ್ಲ.
ವಾಣಿಜ್ಯ ಬೆಳೆ ಹಾನಿ
ಬಂಟ್ವಾಳ: ಒಂದೆಡೆ ದಿಢೀರ್ ಸುರಿದ ಮಳೆ, ಇನ್ನೊಂದೆಡೆ ಅಲ್ಲಲ್ಲಿ ರಸ್ತೆ ಬದಿ ಚರಂಡಿಗಾಗಿ ಅಗೆದು ಹಾಕಿದ ಪರಿಣಾಮ ವಾಹನ ಸವಾರರು ರಸ್ತೆ ಹುಡುಕಿಕೊಂಡು ಹೋಗುವ ದುಸ್ತಿತಿ ಎದುರಾಗಿತ್ತು. ಈ ನಡುವೆ ಪಾದಚಾರಿಗಳು ಕೊಡೆ ಇಲ್ಲದೆ ಪರದಾಡಿದರು. ಇಲ್ಲಿನ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿಕರು ಒಣಗಿಸಲು ಹರಡಿದ್ದ ಕೊಬ್ಬರಿ, ಅಡಿಕೆ, ಗೇರುಬೀಜ ಮತ್ತು ಕಾಳುಮೆಣಸು ಮತ್ತಿತರ ಬೆಳೆ ಹಾನಿಗೀಡಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.