ಕೊಟ್ಟೂರು: ಹರಿಹರ–ಕೊಟ್ಟೂರು–ಹೊಸಪೇಟೆ ಮಾರ್ಗವಾಗಿ ಪ್ಯಾಸೆಂಜರ್ ರೈಲು ಓಡಿಸಬೇಕು ಎಂದು ತಾಲ್ಲೂಕು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಮುಖಂಡರು ನೈಋತ್ಯ ರೈಲ್ವೆ ವಿಭಾ ಗೀಯ ವ್ಯವಸ್ಥಾಪಕ ರಾಜೇಶ್ ಮೋಹನ್ ಅವರಿಗೆ ಮನವಿ ಸಲ್ಲಿಸಿದರು.
‘ಹೊಸಪೇಟೆಯ ರೈಲು ಮಾರ್ಗ ಬ್ರಾಡ್ಗೇಜ್ ಆಗಿ ಪರಿವರ್ತನೆಗೊಂಡು 15 ವರ್ಷ ಕಳೆದಿದೆ. ಆದರೂ ಪ್ಯಾಸೆಂಜರ್ ರೈಲು ಓಡಾಟ ಪ್ರಾರಂಭ ವಾಗಿಲ್ಲ. ಈಗಾಗಲೇ ಕೊಟ್ಟೂರಿನಿಂದ ಹರಿಹರವರೆಗೆ ರೈಲು ಸಂಚಾರ ಮಾಡುತ್ತಿದೆ. ಇದನ್ನು ಹೊಸಪೇಟೆವರೆಗೆ ವಿಸ್ತರಿಸಬೇಕು’ ಎಂದು ಸಂಸ್ಥೆಯ ಅಧ್ಯಕ್ಷ ಪಿ.ಶ್ರೀಧರಶೆಟ್ಟಿ ಒತ್ತಾಯಿಸಿದರು.
ಜೂನ್ ಅಂತ್ಯದಲ್ಲಿ ರೈಲು ಸಂಚಾರ (ಹಗರಿಬೊಮ್ಮನಹಳ್ಳಿ ವರದಿ): ಹೊಸಪೇಟೆಯಿಂದ ಕೊಟ್ಟೂರು ಮತ್ತು ಹರಿಹರದವರೆಗೂ ರೈಲು ಸಂಚಾರವನ್ನು ಜೂನ್ ಅಂತ್ಯದಲ್ಲಿ ಆರಂಭಿಸಲಾಗುವುದು ಎಂದು ರೈಲ್ವೆ ವಿಭಾಗೀಯ ವ್ಯವಸ್ಥಾಪಕ ರಾಜೇಶ್ ಮೋಹನ್ ಹೇಳಿದರು.
ಬುಧವಾರ ಇಲ್ಲಿನ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
‘ರೈಲು ಸಂಚಾರದ ಸುರಕ್ಷತೆ ಕುರಿತಂತೆ ಎಂಜನಿಯರ್ಗಳ ತಂಡ ಸಮಗ್ರವಾಗಿ ಪರಿಶೀಲನೆ ನಡೆಸುತ್ತಿದೆ. ಕೊಟ್ಟೂರು ಬಳಿ ಟ್ರ್ಯಾಕ್ ಗುಣಮಟ್ಟ ತಪಾಸಣೆ ನಡೆಸಲಾಗಿದೆ. ಈ ಮಾರ್ಗದಲ್ಲಿ ಇನ್ನೂ ಬಹಳಷ್ಟು ಕಾಮಗಾರಿಗಳು ಬಾಕಿ ಉಳಿದಿವೆ. ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗಿದೆ. ಹೊಪಸೇಟೆಯಿಂದ ಕೊಟ್ಟೂರು ವರೆಗಿನ ಎಲ್ಲ ಕಾಮಗಾರಿಗಳ ಗುಣಮಟ್ಟ ಪರಿಶೀಲನೆ ನಡೆಸಲಾಗುತ್ತಿದೆ’ ಎಂದರು.
ಕಳೆದ ಮಾರ್ಚ್ ತಿಂಗಳಲ್ಲಿ ರೈಲು ಸಂಚಾರ ಆರಂಭಗೊಳ್ಳಬೇಕಿತ್ತು, ಈಗ ತುಂಬಾ ವಿಳಂಬವಾಗಿದೆ. ಕೂಡಲೇ ಆರಂಭಿಸುವಂತೆ ಹೊಸಪೇಟೆ’ ಕೊಟ್ಟೂರು ಹರಿಹರ ರೈಲ್ವೆ ಹೋರಾಟ ಸಮಿತಿಯ ಸಂಚಾಲಕ ಕೊಟ್ರೇಶ್ ಶೆಟ್ಟರ್ ಒತ್ತಾಯಿಸಿದರು.
ರೈಲ್ವೆ ನಿಲ್ದಾಣ ಅನೈತಿಕ ಚಟುವಟಿಕೆಗೆಳ ಕೇಂದ್ರವಾಗಿದೆ, ಆದ್ದರಿಂದ ಅಲ್ಲಿ ಕಾವಲುಗಾರರನ್ನು ನೇಮಿಸುವಂತೆ ಮುಖಂಡ ಎಚ್.ಎಂ. ಚನ್ನವೀರ ಒತ್ತಾಯಿಸಿದರು.
ಪುರಸಭೆ ಸದಸ್ಯರಾದ ಹುಳ್ಳಿ ಮಂಜುನಾಥ, ಮಾತಾಗ್ಯಾಸ್ ಎರಿಸ್ವಾಮಿ, ಲಕ್ಷ್ಮಣ ಕಲಾಲ್, ಛೇಂಬರ್ ಆಫ್ ಕಾಮರ್ಸ್ನ ಚಂದ್ರಯ್ಯ, ಕೋರಗಲ್ ಗಿರೀಶ್, ಕನ್ನಡ ಸೇನೆಯ ಸಂಚಿ ಶಿವಕುಮಾರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.