ಸೋಮವಾರಪೇಟೆ: ತಾಲ್ಲೂಕಿನ ಐಗೂರು, ಗೌಡಳ್ಳಿ, ಬೇಳೂರು, ಕೋವರ್ಕೊಲ್ಲಿ, ಶಾಂತಳ್ಳಿ ಹೋಬಳಿ, ಗೌಡಳ್ಳಿ, ಅಬ್ಬೂರುಕಟ್ಟೆ, ಕಿಬ್ಬೆಟ್ಟ, ತೋಳೂರುಶೆಟ್ಟಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದ ಪರಿಣಾಮ ಉತ್ತಮ ಮಳೆಯಾಗುತ್ತಿದ್ದು, ರೈತರು ಹರ್ಷ ಚಿತ್ತರಾಗಿದ್ದಾರೆ.
ವಾಡಿಕೆಯಂತೆ ಮಾರ್ಚ್ ಮಧ್ಯಭಾಗದಿಂದ ಅಂತ್ಯದವರೆಗೆ ಕಾಫಿ ಹೂ ಅರಳಲು ಮಳೆಯ ಅವಶ್ಯಕತೆಯಿದ್ದು, ಕಳೆದ ಹಲವು ವರ್ಷಗಳಿಂದ ಸರಿಯಾಗಿ ಮಳೆ ಆಗಿರಲಿಲ್ಲ. ಕಾಫಿ ಬೆಳೆಗಾರರು ಸಂಕಷ್ಟದಲ್ಲಿದ್ದರು.
ಹಿಂದಿನ ಸಾಲಿನಲ್ಲಿ ವಾಯುಭಾರ ಕುಸಿತದಿಂದ ಜನವರಿಯಲ್ಲೇ ಮಳೆಯಾಗಿದ್ದರಿಂದ ಕಾಫಿ ಮತ್ತು ಮೆಣಸಿನ ಫಸಲಿಗೆ ಹಾನಿಯಾಗಿತ್ತು. ಅಕಾಲಿಕ ಮಳೆಗೆ ಕಾಫಿ ಹೂ ಆಗಿದ್ದರಿಂದ ಅಕ್ಟೋಬರ್ನಲ್ಲಿ ಕೆಲವೆಡೆಗಳಲ್ಲಿ ಕಾಫಿ ಹಣ್ಣಾಗಿ ಕೊಯ್ಲಿಗೆ ಬಂದಿತ್ತು. ವಾಯುಭಾರ ಕುಸಿತದಿಂದ ಕಾಫಿ ಬೆಳೆಗಾರರಿಗೆ ಹೆಚ್ಚಿನ ಅನುಕೂಲವಾಗಿದ್ದು, ಕಾಫಿ ಮತ್ತು ಮೆಣಸಿಗೆ ಬೆಳೆಗೆ ಉತ್ತಮ ಮಳೆಯಾಗುತ್ತಿದೆ.
ಬುಧವಾರ ಸಂಜೆಯಿಂದ ಅರ್ಧ ಇಂಚಿನಷ್ಟು ಮಳೆಯಾದರೆ, ಗುರುವಾರ ಮಧ್ಯಾಹ್ನ ಮತ್ತು ಸಂಜೆ ಭಾರಿ ಮಳೆ ಸುರಿಯಿತು. ನಿನ್ನೆ ರಾತ್ರಿಯಿಂದ ಪಟ್ಟಣ ಸೇರಿದಂತೆ ಹಲವು ಗ್ರಾಮಗಳಲ್ಲಿ ವಿದ್ಯುತ್ ಕಡಿತಗೊಂಡಿದ್ದು, ಜನರು ಪರದಾಡಿದರು.