ಸಿರವಾರ (ರಾಯಚೂರು ಜಿಲ್ಲೆ): ‘ಲಿಂಗಾಯತ ಸ್ವತಂತ್ರ ಧರ್ಮ ಕುರಿತು ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ತಜ್ಞರ ಸಮಿತಿ ನೀಡಿರುವ ವರದಿ ಅವೈಜ್ಞಾನಿಕವಾಗಿದೆ’ ಎಂದು ಬಾಳೆಹೊನ್ನೂರಿನ ರಂಭಾಪುರಿ ಮಠದ ಜಗದ್ಗುರು ಪ್ರಸನ್ನರೇಣುಕ ಡಾ.ವೀರಸೋಮೇಶ್ವರ ಶಿವಾಚಾರ್ಯರು ಹೇಳಿದರು.
ಬಲ್ಲಟಗಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವೀರಶೈವ ಧರ್ಮವೇ ಅಲ್ಲ, ಸಿದ್ಧಾಂತ ಶಿಖಾಮಣಿ ಖೊಟ್ಟಿ ಎಂದು ಸಮಿತಿಯು ನೀಡಿರುವ ವರದಿಯು ಮಾರ್ಚ್ 15ರಂದು ಪ್ರಜಾವಾಣಿಯಲ್ಲಿ ಪ್ರಕಟವಾಗಿದೆ. ತಜ್ಞರ ಈ ವರದಿಯು ಸತ್ಯಕ್ಕೆ ದೂರವಾದದು’ ಎಂದು ಹೇಳಿದರು.
‘ಸರ್ಕಾರ ರಚಿಸಿರುವ ತಜ್ಞರ ಸಮಿತಿಯಲ್ಲಿ ಯಾರೊಬ್ಬರಿಗೂ ವೀರಶೈವ ಧರ್ಮದ ಇತಿಹಾಸ ಪರಂಪರೆ ಬಗ್ಗೆ ತಿಳುವಳಿಕೆ, ಕನಿಷ್ಠ ಅರಿವು ಇಲ್ಲ. ಅಂತಹ ಸಮಿತಿಯಿಂದ ನ್ಯಾಯಯುತ ವರದಿ ನಿರೀಕ್ಷೆ ಅಸಾಧ್ಯ. ಸರ್ಕಾರ ವರದಿಯನ್ನು ತಿರಸ್ಕರಿಸಿ ಸಮಾಜದ ಬಗ್ಗೆ ತಿಳಿದ ಮತ್ತೊಂದು ತಜ್ಞರ ತಂಡ ರಚಿಸಿ ವರದಿ ಸಂಗ್ರಹಕ್ಕಾಗಿ ಅಗತ್ಯ ಕಾಲಾವಕಾಶ ನೀಡಬೇಕು’ ಎಂದು ಆಗ್ರಹಿಸಿದರು.
‘ಸತ್ಯ ಸಂಗತಿಗಳನ್ನು ಬದಿಗೊತ್ತಿ ಮತ್ತು ಪಂಚಪೀಠಗಳ ಬಗ್ಗೆ ತಪ್ಪು ಅಭಿಪ್ರಾಯಗಳನ್ನು ಮೂಡಿಸುತ್ತಿರುವ ರಾಜ್ಯ ಸರ್ಕಾರವು ಮುಂದೆ ಅದರ ದುಷ್ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.
‘ಬಸವಣ್ಣನವರೇ ವೀರಶೈವ ಧರ್ಮ ಸ್ವೀಕರಿಸಿ ವೀರಶೈವ ಲಿಂಗಾಯತದ ಮೂಲಕ ಸಮಾಜ ಸುಧಾರಣೆ ಮಾಡಿದ್ದು ನಮ್ಮ ಮುಂದಿದೆ’ ಎಂದು ಹೇಳಿದರು.