ಹುಳಿಯಾರು: ಹೋಬಳಿಯ ಯಗಚಿಹಳ್ಳಿ ಗ್ರಾಮದಲ್ಲಿ ಗುರುವಾರ ಮುಂಜಾನೆ ಪೆಟ್ಟಿಗೆ ಅಂಗಡಿಗೆ ಆಕಸ್ಮಿಕ ಬೆಂಕಿ ತಗುಲಿ ಸುಟ್ಟಿದೆ.
ಅಂಗಡಿಯು ಪ್ಯಾರುಸಾಬ್ ಎಂಬುವರದ್ದಾಗಿದೆ. ಬೆಳಗಿನ ಜಾವ ಬೆಂಕಿ ಹೊತ್ತಿಕೊಂಡಿದೆ. ಅಕ್ಕಪಕ್ಕದ ನಿವಾಸಿಗಳು ಗಮನಿಸಿ ಅಗ್ನಿ ಶಾಮಕ ದಳದವರಿಗೆ ತಿಳಿಸಿದ್ದರಿಂದ ಸಿಬ್ಬಂದಿ ಬಂದು ಬೆಂಕಿ ನಂದಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಶಾಲಾ ಅಡುಗೆ ಕೋಣೆಗೆ ಬೆಂಕಿ
ಕೊರಟಗೆರೆ: ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ಹೊನ್ನಾರನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಅಡುಗೆ ಕೋಣೆಯಲ್ಲಿ ಗುರುವಾರ ಅಡುಗೆ ಅನಿಲ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿತ್ತು.
ಸ್ಥಳಕ್ಕೆ ಅಕ್ಷರದಾಸೋಹ ಅಧಿಕಾರಿ ಎಲ್.ಕಾಮಯ್ಯ ಭೇಟಿ ನೀಡಿದ್ದರು. ಯಾವುದೇ ಪ್ರಾಣಾಪಾಯ ಆಗಿಲ್ಲ ಎಂದು ಹೇಳಿದ್ದಾರೆ.
ಮಹಿಳೆಯ ಸರ ಕಳವು, ದೂರು
ತುರುವೇಕೆರೆ: ತಾಲ್ಲೂಕಿನ ಮಾರಸಂದ್ರದಲ್ಲಿ ಗುರುವಾರ ವಿಳಾಸ ಕೇಳುವ ನೆಪದಲ್ಲಿ ಅಪರಿಚಿತ ಮುಸುಕುಧಾರಿಗಳು ಮಹಿಳೆಯ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದೆ.
ಮಾಂಗಲ್ಯ ಸರ ಕಳೆದುಕೊಂಡ ಮಹಿಳೆ ಶಂಕರಮ್ಮ ಎಂಬುವರಾಗಿದ್ದು, ಮಧ್ಯಾಹ್ನ ತೋಟಕ್ಕೆ ಎಮ್ಮೆ ಹೊಡೆದುಕೊಂಡು ಹೊರಟಿದ್ದಾಗ ದ್ವಿಚಕ್ರವಾಹದಲ್ಲಿ ಬಂದ ಇಬ್ಬರು ಅಪರಿಚಿತರು ಸರ ದೋಚಿದ್ದಾರೆ. ಸರ ಅಂದಾಜು 49 ಗ್ರಾಂ ಇದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ದಾಳಿ; ₹ 1 ಲಕ್ಷ ವಶ
ತುರುವೇಕೆರೆ: ತಾಲ್ಲೂಕಿನ ದಬ್ಬೇಘಟ್ಟ ಹೋಬಳಿ ಸೋಪನಹಳ್ಳಿ ಗ್ರಾಮದ ಲಕ್ಕಪ್ಪನಕಟ್ಟೆ ಸಮೀಪ ಬುಧವಾರ ರಾತ್ರಿ ಜೂಜಾಡುತ್ತಿದ್ದ ಅಡ್ಡೆ ಮೇಲೆ ಪಟ್ಟಣದ ಪೊಲೀಸರು ದಾಳಿ ನಡೆಸಿ ₹ 1 ಲಕ್ಷಕ್ಕೂ ಹೆಚ್ಚಿನ ಹಣ ವಶಪಡಿಸಿಕೊಂಡಿದ್ದಾರೆ.
ಹುಲಿಕಲ್ ಸುರೇಶ್, ರಾಮಚಂದ್ರು, ಕೃಷ್ಣಮೂರ್ತಿ, ದಯಾನಂದ್, ಧರ್ಮೇಗೌಡನಪಾಳ್ಯ ರುದ್ರೇಶ್, ಸೋಪನಹಳ್ಳಿ ಗಣೇಶ್ ಎಂಬುವರು ಬಂಧಿತ ಆರೋಪಿಗಳಾಗಿದ್ದು, ಪಿ.ಎಸ್.ಐ ಪ್ರಕಾಶ್ ನೇತೃತ್ವದ ಪೊಲೀಸ್ ತಂಡ ದಾಳಿ ನಡೆಸಿ ಬಂಧಿಸಿದೆ.