ಹಾಸನ : ಕ್ಷಣಿಕ ಸುಖಕ್ಕಾಗಿ ಅಮೂಲ್ಯ ಬದುಕನ್ನು ಕಡೆಗಣಿಸಬಾರದು. ವಿದ್ಯಾರ್ಥಿ ಜೀವನದಲ್ಲಿ ಜವಾಬ್ದಾರಿ ಯುತ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಜಿಲ್ಲಾ ಏಡ್ಸ್ ಮತ್ತು ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ನಾಗೇಶ್ ಆರಾಧ್ಯ ಹೇಳಿದರು.
ಬಿಳಿಯಮ್ಮ ಈರೇಗೌಡ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಹಯೋಗ ದೊಂದಿಗೆ ನಡೆದ ರೆಡ್ ರಿಬ್ಬನ್ ಕ್ಲಬ್ ಮತ್ತು ಏಡ್ಸ್ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ತರ್ಕಬದ್ಧ ವಿವೇಚನಾಶಕ್ತಿ ಬೆಳೆಸಿಕೊಳ್ಳಬೇಕು. ವಿಜ್ಞಾನ ಮತ್ತು ತಂತ್ರಜ್ಞಾನ ಎಷ್ಟೇ ಮುಂದುವರೆದರೂ ಒಂದು ಹನಿ ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ರಕ್ತದಾನದ ಹವ್ಯಾಸ ಬೆಳೆಸಿಕೊಂಡು ಕಷ್ಟದಲ್ಲಿರುವವರ ಜೀವ ಉಳಿಸುವ ಕಾರ್ಯ ಮಾಡಬೇಕು. ಇಂತಹ ಹವ್ಯಾಸ ಗಳು ಸಮಾಜಮುಖಿ ವ್ಯಕ್ತಿತ್ವ ಬೆಳೆಸಿ ಕೊಳ್ಳಲು ನೆರವಾಗುತ್ತವೆ ಎಂದರು.
ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಮೇಲ್ಚಿಚಾರಕ ಬಿ.ಎಂ. ರವಿಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ 10286 ಎಚ್ಐವಿ ಪ್ರಕರಣಗಳು ಪತ್ತೆಯಾಗಿವೆ. ಇವರಲ್ಲಿ ಶೇ 60 ರಷ್ಟು ಸೋಂಕಿತರು 18 ರಿಂದ 45 ವರ್ಷ ವಯೋಮಿತಿಯವರಾಗಿದ್ದಾರೆ. ಆದ್ದರಿಂದ ಯುವಜನರು ಸಂಯಮ ನಡವಳಿಕೆ ಬೆಳೆಸಿಕೊಂಡು ಜೀವನದ ಗುರಿಯತ್ತ ಗಮನ ಕೇಂದ್ರೀಕರಿಸಬೇಕು ಎಂದು ಕಿವಿಮಾತು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಬಿ.ಈ. ಜಗದೀಶ್ ಮಾತನಾಡಿ, ವಿದ್ಯೆ, ವಿದ್ವತ್ತಿಗಿಂತ ಸಮಾಜಮುಖಿ ಆಲೋಚನೆ ಮತ್ತು ಕೆಲಸಗಳು ಬದುಕಿನ ಎತ್ತರಕ್ಕೆ ಕರೆದೊಯ್ಯುತ್ತವೆ ಎಂದರು.
ಬಿಈಜಿ ಪ್ರಥಮ ದರ್ಜೆ ಸಂಜೆ ಕಾಲೇಜು ಪ್ರಾಂಶುಪಾಲೆ ಎಚ್.ಎ. ರೇಖಾ, ಕಾಲೇಜಿನ ರೆಡ್ ರಿಬ್ಬನ್ ಕ್ಲಬ್ ಸಂಯೋಜಕ ಹಾಗೂ ಪ್ರಾಧ್ಯಾಪಕ ಎಚ್.ಬಿ. ಅಜಿತ್ ಪ್ರಸಾದ್, ಎನ್ಎಸ್ಎಸ್ ಸಂಯೋಜನಾಧಿಕಾರಿ ಆನಂದಕುಮಾರ್, ಪ್ರಾಧ್ಯಾಪಕಿ ಡಿ. ಶೋಭಾ, ಸುನಿಲ್, ವಿದ್ಯಾರ್ಥಿನಿ ಅನುಷಾ ಇದ್ದರು.