ಮುಂಬೈ : ಕಾಡಾನೆಗಳನ್ನು ಪಳಗಿಸಲು ರಾಜ್ಯ ಅರಣ್ಯ ಇಲಾಖೆ ಸಿಬ್ಬಂದಿಗೆ ತರಬೇತಿ ನೀಡಲು ಕರ್ನಾಟಕದ ತರಬೇತುದಾರರ ನೆರವು ಪಡೆಯುವುದಾಗಿ ಮಹಾರಾಷ್ಟ್ರ ಸರ್ಕಾರ ತಿಳಿಸಿದೆ.
‘ರಾಜ್ಯದ ಕೊಲ್ಹಾಪುರ ಜಿಲ್ಲೆಯಲ್ಲಿ ಕಾಡಾನೆಗಳಿಂದ ಬೆಳೆಹಾನಿ ಹಾಗೂ ಮನುಷ್ಯರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ’ ಎಂದು ಗಮನಸೆಳೆಯುವ ಸೂಚನೆ ಅಡಿಯಲ್ಲಿ ಎನ್ಸಿಪಿ ಶಾಸಕಿ ಸಂಧ್ಯಾ ಕುಪೇಕರ್ ಅವರು ಸದನದಲ್ಲಿ ಪ್ರಶ್ನೆ ಕೇಳಿದ್ದರು. ಇದಕ್ಕೆ ಉತ್ತರಿಸಿದ ಅರಣ್ಯ ಸಚಿವ ಸುಧೀರ್ ಮುನ್ಗಂಟಿವಾರ್ ಅವರು ಈ ಸ್ಪಷ್ಟನೆ ನೀಡಿದರು.
‘ತರಬೇತುದಾರರನ್ನು ಕಳುಹಿಸಿಕೊಡುವಂತೆ ಕರ್ನಾಟಕಕ್ಕೆ ಮನವಿ ಮಾಡಲಾಗಿದ್ದು, ಮೇ– ಜೂನ್ ತಿಂಗಳ ನಂತರ ಅವರು ಲಭ್ಯವಾಗಲಿದ್ದಾರೆ. ಅವರ ರಾಜ್ಯದಲ್ಲಿರುವ ಕಾಡಾನೆಗಳ ನಿಯಂತ್ರಣದಲ್ಲಿ ಅಲ್ಲಿನ ತರಬೇತುದಾರರು ಕಾರ್ಯಮಗ್ನರಾಗಿದ್ದು, ನಂತರ ನಮಗೆ ಲಭ್ಯವಾಗಲಿದ್ದಾರೆ’ ಎಂದು ಅವರು ತಿಳಿಸಿದರು.
‘ಕಾಡಾನೆಗಳನ್ನು ಪಳಗಿಸಲು ತರಬೇತಿಗಾಗಿ ರಾಜ್ಯದ ಅರಣ್ಯ ಸಿಬ್ಬಂದಿಯನ್ನು ಕರ್ನಾಟಕಕ್ಕೆ ಕಳುಹಿಸಿಕೊಡಬೇಕು ಎಂದು ಎನ್ಸಿಪಿ ಶಾಸಕ ಜಯಂತ್ ಪಾಟೀಲ್ ಅವರು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದರು. ಈ ಸಲಹೆಗಳನ್ನು ಸರ್ಕಾರವು ಪರಿಗಣಿಸಲಿದೆ’ ಎಂದು ಮನ್ಗಟಿವಾರ್ ಭರವಸೆ ನೀಡಿದರು.