ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಮತಿ ರದ್ದತಿಗೆ ಕಾಶಪ್ಪನವರ ಒತ್ತಾಯ

ನಿಯಮಾವಳಿ ಉಲ್ಲಂಘಿಸಿ ಗಣಿಗಾರಿಕೆ ನಡೆಸಿರುವ ಆರೋಪ
Last Updated 17 ಮಾರ್ಚ್ 2018, 5:42 IST
ಅಕ್ಷರ ಗಾತ್ರ

ಇಳಕಲ್ : ‘ಸಮೀಪದ ಹನಮನಾಳ ಎಸ್‌ಟಿ ಗ್ರಾಮದ ಬಳಿ ಗ್ರಾನೈಟ್ ಶಿಲೆಯ ಗಣಿಗಾರಿಕೆ ಮಾಡಲು ಗೊಮ್ಮಟೇಶ್ವರ ಹಾಗೂ ವೈ.ಎಸ್. ಹೂಲಗೇರಿ ಕಂಪೆನಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ನಿಯಮಬಾಹಿರವಾಗಿ ಅನುಮತಿ ನೀಡಿದ್ದಾರೆ’ ಎಂದು ಆರೋಪಿಸಿದ ಶಾಸಕ ವಿಜಯಾನಂದ ಕಾಶಪ್ಪನವರ, ಕೂಡಲೇ ಗಣಿಗಾರಿಕೆಗೆ ನೀಡಿದ ಅನುಮತಿ ರದ್ದುಪಡಿಸಬೇಕು’ ಎಂದು ಒತ್ತಾಯಿಸಿದರು.

ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಶುಕ್ರವಾರ ಗಣಿಗಾರಿಕೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಗಣಿಗಾರಿಕೆ ಅನುಮತಿ ನೀಡುವಾಗ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಮಾರ್ಗಸೂಚಿಗಳನ್ನು ಪಾಲಿಸಬೇಕಿತ್ತು. ಆದರೆ ಗ್ರಾಮದಿಂದ ಕೇವಲ 50 ಮೀಟರ್, ಹೆದ್ದಾರಿಯಿಂದ ಕೇವಲ 100 ಮೀಟರ್ ಅಂತರದಲ್ಲಿ ಗಣಿಗಾರಿಕೆಗೆ ಅನುಮತಿ ನೀಡಲಾಗಿದೆ. ಅಧಿಕಾರಿಗಳು ನಿಯಮಾವಳಿಗಳನ್ನು ಗಾಳಿಗೆ ತೂರಿ, ಹಣ ಪಡೆದು ಅನುಮತಿ ನೀಡಿದ್ದಾರೆ’ ಎಂದು ಆರೋಪಿಸಿದರು.

‘ಡ್ರಿಲ್ಲಿಂಗ್ ಹಾಗೂ ಬ್ಲಾಸ್ಟಿಂಗ್ ಸಂದರ್ಭದಲ್ಲಿ ಭೂಮಿ ಲಘುವಾಗಿ ಕಂಪಿಸುತ್ತದೆ. ಗ್ರಾಮ ಸಮೀಪದಲ್ಲಿಯೇ ಇರುವ ಕಾರಣ ಅನೇಕ ಮನೆಗಳ ಗೋಡೆಗಳು ಬಿರುಕು ಬಿಟ್ಟಿವೆ. ಇಡೀ ಗ್ರಾಮ ಅಪಾಯಕ್ಕೆ ಸಿಲುಕಿದೆ. ಇಲ್ಲಿ ಗಣಿಗಾರಿಕೆ ಮಾಡುವುದು ಸುರಕ್ಷಿತವಲ್ಲ ಎನ್ನುವ ಕಾರಣಕ್ಕೆ 10 ವರ್ಷಗಳಿಂದ ಗಣಿಗಾರಿಕೆ ಸ್ಥಗಿತಗೊಂಡಿತ್ತು. ಆದರೆ ನಾಲ್ಕು ತಿಂಗಳ ಹಿಂದೆ ಏಕಾಏಕಿ ಮತ್ತೆ ಆರಂಭವಾಗಿದೆ. ನಿನ್ನೆಯಷ್ಟೇ ಗ್ರಾಮಸ್ತರು ನನಗೆ ದೂರು ನೀಡಿದ್ದರು. ಅಧಿಕಾರಿಗಳು ಗಣಿಗಾರಿಕೆಗೆ ನೀಡಿದ ಅನುಮತಿಯನ್ನು ರದ್ದುಪಡಿಸಬೇಕು ಹಾಗೂ ಇಲ್ಲಿ ತಗೆಯಲಾಗಿರುವ ದಿಮ್ಮೆ (ಬ್ಲಾಕ್)ಗಳನ್ನು ವಶಕ್ಕೆ ಪಡೆದುಕೊಳ್ಳಬೇಕು’ ಎಂದು ಒತ್ತಾಯಿಸಿದರು.

ಗ್ರಾಮ ಪಂಚಾಯ್ತಿ ಸದಸ್ಯ ಚಂದ್ರು ವೈ. ಗೌಡರ ಹಾಗೂ ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ ರಾಘವೇಂದ್ರ ಪಾಟೀಲ, ತಹಶೀಲ್ದಾರ್ ಸುಭಾಷ್ ಸಂಪಗಾವಿ, ಕಂದಾಯ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT