ಆನವಟ್ಟಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಹಾಗೂ ಹಿಂದಿನ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರದ ಸೌಲಭ್ಯಗಳು ಎಲ್ಲ ವರ್ಗದವರನ್ನೂ ತಲುಪಿವೆ ಎಂದು ಬಿಜೆಪಿ ಮುಖಂಡ ಕುಮಾರ್ ಬಂಗಾರಪ್ಪ ಹೇಳಿದರು.
ಗುರುವಾರ ಆನವಟ್ಟಿ ಸಮೀಪದ ಕುಬಟೂರು ಕೆರೆ ಅಂಗಳದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ‘ಬದಲಾವಣೆಯ ಅಲೆಯೊಂದಿಗೆ ನಿಮ್ಮ ನಗರಕ್ಕೆ’ ಎಂಬ ಘೋಷಣೆಯಡಿ ಕಮಲ ಜಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಾತ್ರೆಗಳು ನಮ್ಮ ನೆಲ, ಜಲ, ಸಂಸ್ಕೃತಿ, ಪರಂಪರೆಗಳನ್ನು ನೆನಪಿಸುತ್ತವೆ. ಗ್ರಾಮೀಣ ಸೊಗಡನ್ನು ಉಳಿಸಲು ಜಾತ್ರೆಗಳು ಸಹಕಾರಿ.
ಇಂತಹ ಕಾರ್ಯಕ್ರಮಗಳ ಮೂಲಕ ಪಕ್ಷವನ್ನು ಸಂಘಟಿಸಿ ಸದೃಢಗೊಳಿಸೋಣ ಎಂದು ಕರೆ ನೀಡಿದರು.
ರಾಜ್ಯದಲ್ಲೂ ಬಿಜೆಪಿಯ ಅಲೆ ಇದ್ದು ಮುಂದಿನ ಚುನಾವಣೆಯಲ್ಲಿ ಅಧಿಕಾರ ಹಿಡಿಯಲಿದೆ ಕುಮಾರ ಬಂಗಾರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ರಾಜ್ಯ ಸಮಿತಿ ಸದಸ್ಯ ಎಸ್.ದತ್ತಾತ್ರಿ ಮಾತನಾಡಿ, ಪಕ್ಷವು ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಅದರ ಭಾಗವಾಗಿ ಕಮಲ ಜಾತ್ರೆ ಹಮ್ಮಿಕೊಳ್ಳಲಾಗಿದೆ. ಎಲ್ಲರಿಗೂ ಮನರಂಜನೆ ನೀಡುವುದು ಕಾರ್ಯಕ್ರಮದ ಉದ್ದೇಶ. ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರದ ಅವಧಿಯ ಸೌಲಭ್ಯಗಳ ಬಗ್ಗೆ ಜಾತ್ರೆಗೆ ಬರುವವರಿಗೆ ಮಾಹಿತಿ ನೀಡಲಾಗುವುದು ಎಂದರು.
ಶಾಸಕ ಮಧು ಬಂಗಾರಪ್ಪ ಪಕ್ಷದ ಮುಖಂಡರ ಮೂಲಕ ಬಗರ್ಹುಕುಂ ಹಕ್ಕುಪತ್ರ ಪಡೆದ ಫಲಾನುಭವಿಗಳಿಂದ ಹಣ ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ರಾಮಣ್ಣ ಭಜಂತ್ರಿ ಶಹನಾಯಿ ವಾದ್ಯ ಹಾಗೂ ಬನದಕೊಪ್ಪದ ಕಲಾತಂಡದ ಡೊಳ್ಳು ಕುಣಿತ ರಂಜಿಸಿತು.
ಸೊರಬ ತಾಲ್ಲೂಕು ಬಿಜೆಪಿ ಅಧ್ಯಕ್ಷ ಎ.ಎಲ್.ಅರವಿಂದ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ನಾರಾಯಣಪ್ಪ, ಸತೀಶ್, ನಯನ ಹೆಗಡೆ, ಪುರುಷೋತ್ತಮ್, ಗೀತಾ ಮಲ್ಲಿಕಾರ್ಜುನ್, ಪಿ.ಹನುಮಂತಪ್ಪ, ಶ್ರೀಪಾದ ಹೆಗಡೆ, ಶಿವಯೋಗಿ, ಮಲ್ಲಿರ್ಕಾಜುನ, ಮಂಜಪ್ಪ ಮರದರ್ ಅವರೂ ಇದ್ದರು.