ಸವದತ್ತಿ: ‘ಮಾನವ ಕುಲಕ್ಕೆ ಸತ್ಯದ ದರ್ಶನ ಮಾಡಿಸುವ ಲಿಂಗಾಯತ ಧರ್ಮವನ್ನು ಸರಿಯಾಗಿ ಅರಿಯದೇ ಬೇಕಾಬಿಟ್ಟಿ ಮಾತನಾಡುವ ಸ್ಥಳೀಯ ಶಾಸಕರು ಮೊದಲು ಲಿಂಗ ಕಟ್ಟಿಕೊಳ್ಳಲಿ’ ಎಂದು ರಾಷ್ಟ್ರೀಯ ಬಸವ ದಳದ ಗೌರವಾಧ್ಯಕ್ಷ, ಕಾಂಗ್ರೆಸ್ ಮುಖಂಡ ಆನಂದ ಚೋಪ್ರಾ ಸಲಹೆ ನೀಡಿದರು.
ಇಲ್ಲಿನ ಮಿನಿವಿಧಾನಸೌಧದಲ್ಲಿ ಶನಿವಾರ ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಮಾನ್ಯತೆ ನೀಡುವಂತೆ ಆಗ್ರಹಿಸಿ ತಹಶೀಲ್ದಾರ್ ಗಿರೀಶ ಸ್ವಾದಿ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ ಅವರು ಮಾತನಾಡಿದರು.
‘ಒಂದು ಧರ್ಮದ ಬಗ್ಗೆ ಸರಿಯಾಗಿ ತಿಳಿಯದೇ ಅನಗತ್ಯವಾಗಿ ಮಾತನಾಡುತ್ತಿರುವ ಶಾಸಕರು ಲಿಂಗಾಯತರೇ ಅಲ್ಲ’ ಎಂದು ಹೇಳಿದರು.
ರಾಷ್ಟ್ರೀಯ ಬಸವದಳದ ಕಾರ್ಯದರ್ಶಿ ಅನ್ನಪೂರ್ಣಾ ಹಿರಲಿಂಗನವರ, ‘ನಮ್ಮದು ಭಕ್ತಿ ಪಕ್ಷ, ನಮ್ಮ ಬೇಡಿಕೆ ಈಡೇರಿಸಲು
ತಪ್ಪಿದರೆ ಬಸವಭಕ್ತರು ಶಕ್ತಿ ತೋರಿಸಲಿದ್ದಾರೆ’ ಎಂದರು.
‘ಬಸವಣ್ಣನಿಗೆ ಜಾತಿ ಇಲ್ಲ. ಅವರು ಸ್ಥಾಪಿಸಿದ ಧರ್ಮವೇ ಮಾನವ ಧರ್ಮವಾಗಿದೆ’ ಎಂದರು.
ಉಮೇಶ ಬಾಳಿ ಮಾತನಾಡಿ, ‘ಲಿಂಗ ಧರಿಸಿದವರೆಲ್ಲರೂ ಹಾಗೂ ಅದರ ತತ್ವದಡಿ ಬಾಳುವವರೆಲ್ಲರೂ ಲಿಂಗಾಯತರಾಗಿದ್ದಾರೆ. ಆದರೆ, ಇತ್ತೀಚೆಗೆ ನಾವು ಶೈವರು, ವೀರರು, ಶೂರರು ಎನ್ನುವ ಜತೆಗೆ ವೀರಶೈವ ಲಿಂಗಾಯತರು ಒಂದೇ ಎನ್ನುತ್ತಾರೆ’ ಎಂದು ಹೇಳಿದರು.
‘ಮಠಾಧೀಶರು ಬಸವಣ್ಣನವರನ್ನು ಸ್ಮರಿಸುತ್ತಾರೆ. ಅವರ ವಚನಗಳನ್ನು ಹೇಳುತ್ತಾರೆ. ಬಸವಣ್ಣ ಎಂದೇ ಬಸವ ಪುರಾಣ ಹೇಳುತ್ತಾರೆ. ಬಿಕ್ಷೆ ಬೇಡುತ್ತಾರೆ. ಆದರೆ, ನಮ್ಮೊಂದಿಗೆ ಬನ್ನಿ ಎಂದರೆ ತಾವು ವೀರಶೈವರು ಎನ್ನುತ್ತಾರೆ. ಇದು ಹೀಗೆ ಮುಂದುವರೆದರೆ ಇವರೆಲ್ಲರಿಗೂ ಪಾಠ ಕಲಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.
ಜಯಣ್ಣ ಮಾಳಗಿ, ಬಸವರಾಜ ಪ್ರಭುನವರ ಹಾಗೂ ಲಿಂಗಾಯತ ಧರ್ಮ ಮಹಾಸಭೆ, ಲಿಂಗಾಯತ ಸ್ವತಂತ್ರ ಧರ್ಮ ಹೋರಾಟ ಸಮಿತಿ, ಬಸವ ಸೈನ್ಯ, ಅಕ್ಕ ನಾಗಲಾಂಬಿಕೆ ಮಹಿಳಾ ಸಂಘಗಳ ಸದಸ್ಯರು ಭಾಗವಹಿಸಿದ್ದರು.