ಬೆಂಗಳೂರು: ‘ಏ ಮಂಜೇಗೌಡ, ರಾಜೀನಾಮೆ ಕೊಟ್ಟು ಹೊಳೆನರಸೀಪುರಕ್ಕೆ ಹೋಗು. ದೇವೇಗೌಡರ ಮಕ್ಕಳು ಗೆದ್ದಿದ್ದು ಸಾಕು.’
ಹೀಗೆಂದು ದೂರವಾಣಿ ಮೂಲಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಂಜೇಗೌಡ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಾಕೀತು ಮಾಡಿರುವ ಆಡಿಯೋ ಕ್ಲಿಪಿಂಗ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸಿದ್ದರಾಮಯ್ಯ, ಮಂಜೇಗೌಡ ಮತ್ತು ಹೊಳೆನರಸೀಪುರದ ಸೋಮಣ್ಣ ಎಂಬುವವರ ಮಧ್ಯೆ ನಡೆದ ಸಂಭಾಷಣೆ ಹೀಗಿದೆ:
ಸಿದ್ದರಾಮಯ್ಯ: ‘ಏಯ್ ಮಂಜೇಗೌಡ ರಾಜೀನಾಮೆ ಕೊಡ್ತೀನಿ ಅಂತ ಹೇಳಿದೆ. ಕೊಟ್ಟೇ ಇಲ್ಲ’.
ಮಂಜೇಗೌಡ: ‘ಬೆಳಿಗ್ಗೆ ಬಂದಿದ್ದೆ. ನೀವು ಇರಲಿಲ್ಲ. ಈಗ ಹೊಳೆ ನರಸೀಪುರದಲ್ಲಿ ಇದ್ದೇನೆ’.
ಸಿದ್ದರಾಮಯ್ಯ: ‘ಮಂಜೇಗೌಡ, ಆಫೀಸರ್ಗೆ ಫೋನ್ ಕೊಡು ರಾಜೀನಾಮೆ ಸ್ವೀಕರಿಸಲು ಹೇಳುತ್ತೀನಿ’.
ಆಗ ಮಂಜೇಗೌಡ ಕಲ್ಲೇನಹಳ್ಳಿ ಸೋಮಣ್ಣ ಎಂಬುವವರಿಗೆ ದೂರವಾಣಿ ನೀಡುತ್ತಾರೆ.
ಸೋಮಣ್ಣ: ‘ನಮಸ್ಕಾರ ಸಾರ್.’
ಸಿದ್ದರಾಮಯ್ಯ: ‘ಮಂಜೇಗೌಡನ ಈ ಸಲ ಕ್ಯಾಂಡಿಡೇಟ್ ಮಾಡುತ್ತೇವೆ. ಎಲ್ಲ ಸೇರಿ ಗೆಲ್ಲಿಸಿ. ದೇವೇಗೌಡರ ಮಕ್ಕಳನ್ನ(ರೇವಣ್ಣ) ಗೆಲ್ಲಿಸಿದ್ದು ಸಾಕಯ್ಯ’.
ಸೋಮಣ್ಣ: ‘ನೀವು ಸಹಕಾರ ಮಾಡಿದ್ರೆ ಆಗುತ್ತೆ. ಮೊದಲಿಂದಲೂ ಅವರಿಗೇ ಸಹಕಾರ ಕೊಟ್ಟುಕೊಂಡು ಬಂದಿದ್ದೀರಿ’.
ಸಿದ್ದರಾಮಯ್ಯ: ‘ಮೊದಲು ಅವರ ಜತೆಲಿ ಇದ್ದಾಗ ಅಷ್ಟೆ’.
ಸೋಮಣ್ಣ: ‘ಈ ಸಲನೂ ಮಾಡಿದ್ದೀರಲ್ಲ. ಒಂದು ರಸ್ತೆನೂ ಬಿಡದಂಗೆ ಮುಚ್ಚಾಕವ್ರೆ.’
ಸಿದ್ದರಾಮಯ್ಯ: ‘ಕ್ಷೇತ್ರದ ಕೆಲಸಗಳಿಗಷ್ಟೆ ದುಡ್ಡು ಕೊಟ್ಟಿದ್ದೇನೆ ಹೊರತು ರಾಜಕೀಯವಾಗಿ ಬೆಂಬಲ ಇಲ್ಲ ಅವರಿಗೆ’
ಈ ಸಂಭಾಷಣೆಯ ಆಡಿಯೊ ಕ್ಲಿಪ್ಪಿಂಗ್ ಈಗ ವಾಟ್ಸ್ಆ್ಯಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.