ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈಕೋರ್ಟ್‌ನಲ್ಲಿ ಇಂದು ವಿಚಾರಣೆ

Last Updated 19 ಮಾರ್ಚ್ 2018, 20:49 IST
ಅಕ್ಷರ ಗಾತ್ರ

ಬೆಂಗಳೂರು: 2016ರ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಪಕ್ಷದ ಏಳು ಬಂಡಾಯ ಶಾಸಕರ ಸದಸ್ಯತ್ವ ರದ್ದು ಪಡಿಸುವಂತೆ ಜೆಡಿಎಸ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸೋಮವಾರ ನಡೆಸಿದ ವಿಧಾನಸಭೆ ಅಧ್ಯಕ್ಷ ಕೆ.ಬಿ.ಕೋಳಿವಾಡ ತೀರ್ಪನ್ನು ಕಾಯ್ದಿರಿಸಿದ್ದಾರೆ.

‘ಏಳು ಶಾಸಕರ ಸದಸ್ಯತ್ವ ರದ್ದತಿಗೆ ಮನವಿ ಮಾಡಿ ಎರಡು ವರ್ಷಗಳ ಹಿಂದೆಯೇ ಅರ್ಜಿ ಸಲ್ಲಿಸಲಾಗಿತ್ತು. ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಇತ್ತೀಚೆಗೆ ಮತ್ತೊಂದು ಅರ್ಜಿ ನೀಡಿದ್ದೇವೆ. ಅದರ ಮೇಲೂ ತೀರ್ಪು ಕಾಯ್ದಿರಿಸಿದ್ದಾರೆ. ಹೀಗಾಗಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದೇವೆ. ಮಂಗಳವಾರ ಅರ್ಜಿ ವಿಚಾರಣೆಗೆ ಬರಲಿದೆ’ ಎಂದು ಜೆಡಿಎಸ್‌ ಶಾಸಕ ಬಿ.ಬಿ.ನಿಂಗಯ್ಯ ತಿಳಿಸಿದರು.

ಅಲ್ಲದೆ, ಇದೇ 23 ರಂದು ನಡೆಯುವ ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಬಿ.ಎಂ.ಫಾರೂಕ್‌ಗೆ ಮತ ಹಾಕುವಂತೆ ಬಂಡಾಯ ಶಾಸ
ಕರೂ ಸೇರಿ 37 ಶಾಸಕರಿಗೆ ವಿಪ್‌ ಕೊಡಲಾಗಿದೆ ಎಂದೂ ಅವರು ಹೇಳಿದರು.

ಪಕ್ಷಾಂತರ ಕಾಯ್ದೆ ವ್ಯಾಪ್ತಿಗೆ ಬರುವುದಿಲ್ಲ: ಶಾಸಕರ ಸದಸ್ಯತ್ವ ಅನರ್ಹತೆ ಕುರಿತು ಜೆಡಿಎಸ್‌ ಮತ್ತು ಬಂಡಾಯ ಶಾಸಕರ ವಾದ ಮತ್ತು ಪ್ರತಿವಾದ ಸ್ಪೀಕರ್‌ ಕೊಠಡಿಯಲ್ಲಿ ಸುಮಾರು ಒಂದು ಗಂಟೆ ಕಾಲ ನಡೆಯಿತು. ಬಂಡಾಯ ಶಾಸಕರ ಪರ ವಾದಿಸಿದ ಹಿರಿಯ ವಕೀಲ ರಾಜ
ಗೋಪಾಲ್‌, ಸಂವಿಧಾನದ ಷೆಡ್ಯೂಲ್‌ 10 ಅನ್ವಯ ರಾಜ್ಯಸಭಾ ಚುನಾವಣೆಯಲ್ಲಿ ಶಾಸಕರು ಏಜೆಂಟರಿಗೆ ತೋರಿಸಿ ಮತ ಚಲಾಯಿಸಲು ಅವಕಾಶ
ವಿದೆ. ಬಂಡಾಯ ಶಾಸಕರು ಎಚ್‌.ಡಿ.ರೇವಣ್ಣ ಅವರಿಗೆ ತೋರಿಸಿಯೇ ಮತ ಹಾಕಿದ್ದಾರೆ. ಆದ್ದರಿಂದ ಇದು ಪಕ್ಷಾಂತರ ಕಾಯ್ದೆಯ ವ್ಯಾಪ್ತಿಗೆ ಬರುವುದಿಲ್ಲ ಎಂದರು.

ಗೋವಾ ಮುಖ್ಯಮಂತ್ರಿ ರವಿಕಾಂತ ನಾಯಕ್‌ ಪ್ರಕರಣದಲ್ಲಿ ಅಡ್ಡ ಮತದಾನ ಮಾಡಿದ ಕೆಲವು ಶಾಸಕರನ್ನು ಸದಸ್ಯತ್ವದಿಂದ ಅನರ್ಹಗೊಳಿಸಲಾಗಿತ್ತು. ಅಲ್ಲಿ ಶಾಸಕರು ಕಾನೂನು ಉಲ್ಲಂಘಿಸಿದ್ದರು.
ಆದರೆ, ಇಲ್ಲಿ ಶಾಸಕರು ಕಾನೂನು ಉಲ್ಲಂಘನೆ ಮಾಡಿಲ್ಲ. ಆದ್ದರಿಂದ ಅನರ್ಹತೆ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಅವರು ವಾದಿಸಿದರು.

ಜೆಡಿಎಸ್‌ ಪರ ವಾದಿಸಿದ ವಕೀಲ ನಿಶಾಂತ್‌, ‘ಬಂಡಾಯ ಶಾಸಕರು ತಮ್ಮ ಪಕ್ಷದ ಅಭ್ಯರ್ಥಿಯಲ್ಲದವರಿಗೆ ಮತ ಹಾಕಿದ್ದಾರೆ. ಮತ ತೋರಿಸಿ ಹಾಕಿದ್ದೇ ಕಾನೂನು ಉಲ್ಲಂಘನೆ. ಆದ ಕಾರಣ ಇವರ ಸದಸ್ಯತ್ವ ಅನರ್ಹಗೊಳಿಸಬೇಕು’ ಎಂದರು.

ಬಂಡಾಯ ಶಾಸಕರು ಅಡ್ಡ ಮತದಾನ ಮಾಡುವುದಕ್ಕೆ ಮೊದಲೇ ಕಾಂಗ್ರೆಸ್‌ ನಾಯಕ ದಿಗ್ವಿಜಯ್‌ಸಿಂಗ್‌, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದರು. ಅವರ ಉದ್ದೇಶ ಅಡ್ಡ ಮತದಾನ ಮಾಡುವುದಾಗಿತ್ತು. ಭವಿಷ್ಯದಲ್ಲಿ ಇಂತಹ ಪ್ರಕರಣಮರುಕಳಿಸಬಾರದು ಎಂದು ವಿಚಾರಣೆ ಆರಂಭಕ್ಕೆ ಮೊದಲೇ ಶಾಸಕ ಬಿ.ಬಿ.ನಿಂಗಯ್ಯ ಮನವಿ ಮಾಡಿದರು.

ಶಾಸಕರಾದ ಚೆಲುವರಾಯಸ್ವಾಮಿ, ಜಮೀರ್‌ ಅಹಮದ್‌, ಎಚ್‌.ಸಿ.ಬಾಲಕೃಷ್ಣ, ಅಖಂಡ ಶ್ರೀನಿವಾಸಮೂರ್ತಿ ಹಾಜರಿದ್ದರು. ಶಾಸಕರಾದ ಭೀಮಾನಾಯಕ್‌, ರಮೇಶ್‌ ಬಂಡಿಸಿದ್ದೇಗೌಡ, ಇಕ್ಬಾಲ್‌ ಅನ್ಸಾರಿ ಹಾಜರಿರಲಿಲ್ಲ.

ಕಿರುಕುಳ ನೀಡುತ್ತಿರುವ ದೇವೇಗೌಡರು: ಚೆಲುವರಾಯ ಸ್ವಾಮಿ

ನಮ್ಮ ಸದಸ್ಯತ್ವ ಅನರ್ಹಗೊಳಿಸಲು ದೇವೇಗೌಡರು ಅನಗತ್ಯ ಒತ್ತಡ ಹೇರುತ್ತಿದ್ದಾರೆ. ನ್ಯಾಯಾಲಯದ ತೀರ್ಪು ಏನಾದರೂ ಬರಲಿ, ಮೇ ತಿಂಗಳಲ್ಲಿ ಜನರೇ ಅವರಿಗೆ ಪಾಠ ಕಲಿಸುತ್ತಾರೆ’ ಎಂದು ಶಾಸಕ ಎನ್‌. ಚೆಲುವರಾಯ ಸ್ವಾಮಿ ಹೇಳಿದರು.

‘ಪ್ರಜಾತಂತ್ರದಲ್ಲಿ ಪಕ್ಷ ಬದಲಾವಣೆ, ಅಭಿಪ್ರಾಯ ಭೇದ ಸಹಜ. ಹಿಂದೆ ಇದೇ ದೇವೇಗೌಡರು ರಾಮಕೃಷ್ಣ ಹೆಗಡೆ ಅವರನ್ನು ಬಿಟ್ಟು ಹೊರ ಬರಲಿಲ್ಲವೆ. ದೇವೇಗೌಡ ಮತ್ತು ಕುಮಾರಸ್ವಾಮಿ ನಮ್ಮ ಬಗ್ಗೆ ಜನರಲ್ಲಿ ಅನಗತ್ಯ ಗೊಂದಲ ಹುಟ್ಟಿಸುತ್ತಿದ್ದಾರೆ’ ಎಂದೂ ದೂರಿದರು.

ಏನೇ ಆದರೂ ದೇವೇಗೌಡರು ಪ್ರಶ್ನಾತೀತ ನಾಯಕ. ಅವರ ಬಗ್ಗೆ ಗೌರವ, ಪ್ರೀತಿ ಇದೆ ಎಂದು ಚೆಲುವರಾಯ ಸ್ವಾಮಿ ತಿಳಿಸಿದರು.

ವಿಪ್‌ ಕೊಟ್ಟ ಮೇಲೆ ತೀರ್ಮಾನ: ಇದೇ 23 ರಂದು ನಡೆಯುವ ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗೆ ಮತ ಚಲಾಯಿಸುವಂತೆ ನೀಡಿರುವ ವಿಪ್‌ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಜಮೀರ್‌ ಅಹಮದ್‌, ‘ವಿಪ್‌ ಬಂದ ಮೇಲೆ ತೀರ್ಮಾನಿಸುತ್ತೇವೆ.  ಜೆಡಿಎಸ್‌ಗೆ ಗೆಲ್ಲಲು ಶಾಸಕರ ಬಲವೇ ಇಲ್ಲ. 29 ಶಾಸಕರು ಮತ ಹಾಕಿದರೆ ಗೆಲ್ಲಲ್ಲು ಸಾಧ್ಯವೇ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT