ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ, ಮಾಜಿ ಪೊಲೀಸ್ ಅಧಿಕಾರಿ ಸಾಂಗ್ಲಿಯಾನ ಅವರು ‘ನಿರ್ಭಯಾ ಅವರ ತಾಯಿಯೇ ಸುಂದರವಾಗಿದ್ದು ಉತ್ತಮ ಮೈಕಟ್ಟು ಹೊಂದಿದ್ದಾರೆ. ಅಂದಮೇಲೆ ಅವರ ಮಗಳು ಇನ್ನೆಷ್ಟು ಚೆನ್ನಾಗಿರಬಹುದು ಎಂದು ಊಹಿಸಬಲ್ಲೆ’ ಎಂದಿರುವುದು ವರದಿಯಾಗಿದೆ (ಪ್ರ.ವಾ., ಮಾ. 17).
ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸಿದ ಅನುಭವವಿರುವ ಇವರ ಮನಸ್ಥಿತಿ ಇಷ್ಟು ಕೀಳಾಯಿತೇ? ಸಣ್ಣ ಪುಟ್ಟದ್ದಕ್ಕೆಲ್ಲಾ ಹೋರಾಟ ಮಾಡುವ ಮಹಿಳೆಯರು ಈಗ ಸುಮ್ಮನಿರುವುದಾದರೂ ಏಕೆ? ನಿರ್ಭಯಾಳ ತಾಯಿಗೆ ಈ ಮಾತುಗಳನ್ನು ಕೇಳಿ ಎಷ್ಟು ನೋವಾಗಿರಬಹುದು?
ಕನ್ನಡಿಗರು ಆರಾಧಿಸುತ್ತ ಇದ್ದುದು ಇದೇ ಸಾಂಗ್ಲಿಯಾನ ಅವರನ್ನೇ? ರಾಜಕೀಯಕ್ಕೆ ಇಳಿದ ಮೇಲೆ ಅವರು ಬದಲಾಗಿಹೋದರೇ? ಇವರ ಮಾತುಗಳನ್ನು ಕೇಳಿ ‘ಸಾಂಗ್ಲಿಯಾನ’ ಚಲನಚಿತ್ರದ ನಾಯಕ ಶಂಕರ್ನಾಗ್ ಅವರ ಆತ್ಮ ಚಡಪಡಿಸಿ ಬಿಕ್ಕಳಿಸಿತ್ತೋ ಏನೋ!