ಬೀದರ್: ನಗರದಲ್ಲಿ ಮೊದಲ ಬಾರಿಗೆ ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ಹೋರಾಟದ ಕಿಡಿಯನ್ನು ಹೊತ್ತಿಸಲಾಯಿತು. ಮುಂದೆ ರಾಜ್ಯದ ತುಂಬವ್ಯಾಪಿಸಿ ಚಳವಳಿ ಸ್ವರೂಪ ಪಡೆಯಿತು.
ಲಿಂಗಾಯತರ ನಿರಂತರ ಹೋರಾಟಕ್ಕೆ ರಾಜ್ಯ ಸರ್ಕಾರ ಕೊನೆಗೂ ಮಣಿದು ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗೆ ಕೇಂದ್ರಕ್ಕೆ ಶಿಫಾರಸು ಮಾಡಲು ನಿರ್ಧರಿಸಿರುವುದು ಲಿಂಗಾಯತರ ಪಾಲಿಗೆ ಮೊದಲ ಹಂತದ ಜಯವಾಗಿದೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.
ಬೀದರ್ನಲ್ಲೇ ‘ಏಕ್ ಮರಾಠಾ, ಲಾಖ್ ಮರಾಠಾ’ ಘೋಷವಾಕ್ಯದೊಂದಿಗೆ ನಡೆದಿದ್ದ ಮರಾಠರ ಹೋರಾಟದಿಂದ ಪ್ರೇರಣೆ ಪಡೆದ ಲಿಂಗಾ
ಯತ ಸಮುದಾಯವು ‘ಒಬ್ಬ ಲಿಂಗಾಯತ, ಕೋಟಿ ಲಿಂಗಾಯತ’ ಘೋಷಣೆಯೊಂದಿಗೆ 2017ರ ಜುಲೈ 19 ರಂದು ಬೃಹತ್ ರ್ಯಾಲಿ ಆಯೋಜಿಸಿ ರಾಜ್ಯದ ಗಮನ ಸೆಳೆದಿತ್ತು. ನೆರೆಯ ತೆಲಂಗಾಣ ಹಾಗೂ ಮಹಾರಾಷ್ಟ್ರದ ಜಿಲ್ಲೆಗಳ ಲಿಂಗಾಯತರೂ ಪಾಲ್ಗೊಂಡು ಹೋರಾಟಕ್ಕೆ ಇನ್ನಷ್ಟು ಶಕ್ತಿ ತುಂಬಿದ್ದರು.
ಷಟ್ಸ್ಥಲ ಧ್ವಜ, ಬಸವೇಶ್ವರ ಚಿತ್ರವಿದ್ದ ಕೇಸರಿ ಧ್ವಜ, ಪೋಸ್ಟರ್ ಹಿಡಿದು, ‘ಲಿಂಗಾಯತ ಸ್ವತಂತ್ರ ಧರ್ಮ’ ಎಂದು ಬರೆಯಲಾದ ಟೋಪಿ ಧರಿಸಿದ್ದ ಸಾವಿರಾರು ಯುವಕರು ಶಾಂತಿಯುತವಾಗಿ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ್ದರು. ಕೂಡಲಸಂಗಮ ಬಸವಧರ್ಮ ಪೀಠದ ಅಧ್ಯಕ್ಷೆ ಮಾತೆ ಮಹಾದೇವಿ ಹಾಗೂ ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಮುಖ್ಯಮಂತ್ರಿಗೆ ಬರೆದ ಮನವಿಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದ್ದರು.
ಇದಕ್ಕೂ ಮೊದಲು ಮಾತೆ ಮಹಾದೇವಿ ಅವರು ಬಸವಣ್ಣನವರ ವಚನಾಂಕಿತ ತಿದ್ದಿದ್ದ ಕಾರಣ ಲಿಂಗಾಯತ ಸಮುದಾಯದಲ್ಲಿ ಬಿರುಕು ಕಾಣಿಸಿ
ಕೊಂಡಿತ್ತು. ಮಾತೆ ಮಹಾದೇವಿ ಹಾಗೂ ಬಸವಲಿಂಗ ಪಟ್ಟದ್ದೇವರು ಪ್ರತ್ಯೇಕ ಬಣಗಳನ್ನು ಪ್ರತಿನಿಧಿಸಿದ್ದರು. ಧರ್ಮ ಮಾನ್ಯತೆಯ ಹೋರಾಟದಲ್ಲಿ ಎರಡೂ ಬಣಗಳು ಒಗ್ಗಟ್ಟು ಪ್ರದರ್ಶಿಸಿದ್ದವು.
‘ರಾಜ್ಯ ಸಚಿವ ಸಂಪುಟವು ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗಾಗಿ ಕೇಂದ್ರಕ್ಕೆ ಶಿಫಾರಸು ಮಾಡಲು ನಿರ್ಣಯಿಸಿರುವುದು ಬಸವಣ್ಣನ ತತ್ವ ಹಾಗೂ ಹಲವು ವರ್ಷಗಳ ಹೋರಾಟಕ್ಕೆ ಸಂದ ಜಯ ಆಗಿದೆ’ ಎಂದು ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷೆ ಅಕ್ಕ ಅನ್ನಪೂರ್ಣ ಹರ್ಷ ವ್ಯಕ್ತಪಡಿಸಿದ್ದಾರೆ.
‘ಬಸವಣ್ಣನವರನ್ನು ಧರ್ಮಗುರು ಹಾಗೂ ವಚನ ಸಾಹಿತ್ಯವನ್ನು ಧರ್ಮಗ್ರಂಥವೆಂದು ಒಪ್ಪಿಕೊಂಡರೆ ವೀರಶೈವರೂ ಲಿಂಗಾಯತ ಧರ್ಮ ಸೇರ
ಬಹುದು’ ಎಂದು ಬಸವಲಿಂಗ ಪಟ್ಟದ್ದೇವರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.