ಬೆಂಗಳೂರು: ನಗರದ ನೂತನ ಮಹಾ ಧರ್ಮಾಧ್ಯಕ್ಷರನ್ನಾಗಿ (ಆರ್ಚ್ ಬಿಷಪ್) ಪೀಟರ್ ಮಚಾದೊ ಅವರನ್ನು ನೇಮಕ ಮಾಡಿ ಕ್ಯಾಥೋಲಿಕ್ ಸಮುದಾಯದವರ ಪೋಪ್ ಫ್ರಾನ್ಸಿಸ್ ಸೋಮವಾರ ಆದೇಶ ಹೊರಡಿಸಿದ್ದಾರೆ.
ಮಚಾದೊ ಅವರು 2006ರ ಫೆ.2ರಿಂದ ಬೆಳಗಾವಿಯ ಧರ್ಮಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
1954ರ ಮೇ 26ರಂದು ಹೊನ್ನಾವರದಲ್ಲಿ ಜನಿಸಿದ್ದ ಅವರು ಪುಣೆಯ ಪಾಪಲ್ ಸೆಮಿನರಿಯಲ್ಲಿ ತತ್ವಶಾಸ್ತ್ರ ಹಾಗೂ ದೇವತಾಶಾಸ್ತ್ರ ಅಭ್ಯಾಸ ಮಾಡಿದ್ದಾರೆ. 1978ರಲ್ಲಿ ಕಾರವಾರದಲ್ಲಿ ಪಾದ್ರಿಯಾಗಿ ದೀಕ್ಷೆ ಸ್ವೀಕರಿಸಿದ್ದರು. ರೋಮ್ನಲ್ಲಿ ಡಾಕ್ಟರೇಟ್ ಅಧ್ಯಯನ ನಡೆಸಿದ್ದಾರೆ.
ಕರ್ನಾಟಕ ಪ್ರಾದೇಶಿಕ ಕ್ಯಾಥೋಲಿಕ್ ಬಿಷಪ್ಸ್ ಕೌನ್ಸಿಲ್ನ ಸದಸ್ಯರು ಹಾಗೂ ಸೇಂಟ್ ಪೀಟರ್ಸ್ ಪೊಂಟಿಫಿಕಲ್ ಸೆಮಿನರಿ ಹಾಗೂ ಇನ್ಸ್ಟಿಟ್ಯೂಟ್ನ ಆಡಳಿತ ಮಂಡಳಿಯ ಸದಸ್ಯರೂ ಆಗಿದ್ದಾರೆ.
ಆಲ್ ಕರ್ನಾಟಕ ಯುನೈಟೆಡ್ ಕ್ರಿಶ್ಚಿಯನ್ ಫೋರಂ ಫಾರ್ ಹ್ಯೂಮನ್ ರೈಟ್ಸ್ನ ಸದಸ್ಯ ಹಾಗೂ ಕರ್ನಾಟಕ ರೀಜನಲ್ ಬಿಷಪ್ಸ್ ಲೈಟಿ ಕಮಿಷನ್ನ ಅಧ್ಯಕ್ಷರಾಗಿರುವ ಅವರು ಕ್ಯಾಥೋಲಿಕ್ ಕೌನ್ಸಿಲ್ ಆಫ್ ಕರ್ನಾಟಕದ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಬರ್ನಾರ್ಡ್ ಮೊರಾಸ್ ಅವರು 14 ವರ್ಷಗಳಿಂದ ಬೆಂಗಳೂರಿನ ಮಹಾ ಧರ್ಮಾಧ್ಯಕ್ಷರಾಗಿದ್ದರು. ಮಚಾದೊ ಅವರು ಅಧಿಕಾರ ಸ್ವೀಕರಿಸುವವರೆಗೆ ಮೊರಾಸ್ ಅವರು ಆಡಳಿತಾಧಿಕಾರಿಯಾಗಿ ಮುಂದುವರೆಯಲಿದ್ದಾರೆ.