ಕೂಡ್ಲಿಗಿ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಜನರು ಮೂರು ದಿನಗಳ ಕಾಲ ಯುಗಾದಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದರು.
ಯುಗಾದಿ ಅಮಾವಾಸ್ಯೆಯ ದಿನವಾದ ಶನಿವಾರ ಜನರು ತಮ್ಮ ಮನೆಗಳಲ್ಲಿ ಪೂಜೆ ಸಲ್ಲಿಸಿ ವಿವಿಧ ದೇವಸ್ಥಾನಗಳಿಗೆ ತೆರಳಿ ದರ್ಶನ ಪಡೆದರು. ಯುಗಾದಿ ದಿನವಾದ ಭಾನುವಾರ ಮನೆಗಳಿಗೆ ತಳಿರು ತೋರಣ ಕಟ್ಟಿ ಸಿಂಗರಿಸಿದ್ದರು. ಮನೆ ಮಂದಿ ಹೊಸ ಉಡುಪುಗಳನ್ನು ತೊಟ್ಟು ಸಂಭ್ರಮಿಸಿದರು. ನಂತರ ಸೇವಿಗೆ ಜೊತೆಗೆ ಬೇವು ಬೆಲ್ಲ ಸವಿದರು.
ಸೋಮವಾರ ಯುಗಾದಿ ಚಂದ್ರನನ್ನು ನೋಡಿದ ಜನರು ಚಂದ್ರನಿಗೆ ಪೂಜೆ ಸಲ್ಲಿಸಿ, ಮನೆಯ ಹಿರಿಯರ ಆಶೀರ್ವಾದ ಪಡೆದ ದೃಶ್ಯ ಕಂಡು ಬಂತು.
ಹಿರೇಕುಂಬಳಗುಂಟೆ: ಇಲ್ಲಿ ಯುಗಾದಿ ಅಂಗವಾಗಿ ಭಾನುವಾರ ಯುವ ಬ್ರಿಗೇಡ್ ವತಿಯಿಂದ ಯುವತಿಯರಿಗೆ ಬೀಸು ಕಲ್ಲಿನಿಂದ ಹಿಟ್ಟು ಬೀಸುವುದು, ರೊಟ್ಟಿ ತಟ್ಟುವುದು, ಕಾಳು ಶುಚಿ ಮಾಡುವ ಸ್ಪರ್ಧೆಗಳು ನಡೆದವು.
ಜಿ.ಎಂ. ನಾಗರಾಜ, ಟಿ.ಎಸ್. ರಮೇಶ್, ಕೆ. ನಾಗರಾಜ, ಕೊಟ್ರೇಶ್, ಕರಿಬಸಪ್ಪ, ಸಿದ್ದೇಶ್ ನಿರ್ವಹಿಸಿದರು.