ಬೆಂಗಳೂರು: ಉದ್ಯಮಿ ಲೋಕನಾಥ್ ಪುತ್ರ ವಿದ್ವತ್ ಮೇಲೆ ಹಲ್ಲೆ ನಡೆದ ಬಳಿಕ ಬಂದ್ ಮಾಡಿಸಲಾಗಿದ್ದ ಯು.ಬಿ ಸಿ.ಟಿಯ ಫರ್ಜಿ ಕೆಫೆಯು ಸದ್ಯದಲ್ಲೇ ಪುನಃ ಆರಂಭವಾಗಲಿದೆ.
ಕೆಫೆಯಲ್ಲಿ ಫೆ. 17ರಂದು ನಡೆದಿದ್ದ ಗಲಾಟೆ ವೇಳೆ ವಿದ್ವತ್ ಮೇಲೆ ಹಲ್ಲೆ ನಡೆದಿತ್ತು. ಈ ಪ್ರಕರಣದ ಆರೋಪಿ ಮೊಹಮ್ಮದ್ ನಲಪಾಡ್ ಹಾಗೂ ಆತನ ಸ್ನೇಹಿತರು ಜೈಲು ಸೇರಿದ್ದಾರೆ. ಘಟನೆಯ ಮರುದಿನವೇ ಕಬ್ಬನ್ ಪಾರ್ಕ್ ಪೊಲೀಸರು, ಕೆಫೆಯನ್ನು ಮುಚ್ಚಿಸಿದ್ದರು.
‘ಕೆಫೆಯೊಳಗೆ ಎಷ್ಟು ಸೀಟುಗಳಿವೆಯೋ ಅಷ್ಟು ಗ್ರಾಹಕರನ್ನು ಮಾತ್ರ ಒಳಗೆ ಬಿಡಬೇಕು. ಪ್ರತಿಯೊಂದು ಸ್ಥಳವೂ ಕಾಣಿಸುವಂತೆ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಬೇಕು. ಧೂಮಪಾನಕ್ಕೆ ಅವಕಾಶ ನೀಡಬಾರದು ಎಂದು ಸೂಚನೆ ನೀಡಿದ್ದೇವೆ. ಇದನ್ನು ಪಾಲಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳಲಿದ್ದೇವೆ’ ಎಂದು ಡಿಸಿಪಿ ಚಂದ್ರಗುಪ್ತ ‘ಪ್ರಜಾವಾಣಿ’ಗೆ ತಿಳಿಸಿದರು.