ನವದೆಹಲಿ: ಮಹೀಂದ್ರಾ ಆ್ಯಂಡ್ ಮಹೀಂದ್ರಾ ಕೃಷಿ ಸಲಕರಣೆ ವಿಭಾಗವು ಕೊಡಮಾಡುವ 2018ರ ಸಾಲಿನ ‘ಮಹೀಂದ್ರಾ ಸಮೃದ್ಧಿ ಭಾರತ್ ಕೃಷಿ ಪ್ರಶಸ್ತಿ’ ಪ್ರಕಟಿಸಿದೆ.
ಜೀವಮಾನದ ಸಾಧನೆಗೆ ನೀಡಲಾಗುವ ‘ಮಹೀಂದ್ರಾ ಸಮೃದ್ಧಿ ಕೃಷಿ ಶಿರೋಮಣಿ ಪ್ರಶಸ್ತಿಗೆ ಡಾ. ದೀಪಕ್ ಪೆಂಟಾಲ್ ಅವರು ಭಾಜನರಾಗಿದ್ದಾರೆ. ಹತ್ತಿ ಮತ್ತು ಸಾಸಿವೆ ಬೆಳೆಗಳಿಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿನ ಸಂಶೋಧನೆ ಪರಿಗಣಿಸಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. 2011ರಲ್ಲಿ ಈ ಪ್ರಶಸ್ತಿ ಸ್ಥಾಪಿಸಲಾಗಿದ್ದು, ಪ್ರತಿ ವರ್ಷ ಕೃಷಿ ಸಾಧಕರಿಗೆ ನೀಡಲಾಗುತ್ತಿದೆ.
ವರ್ಷದ ಪ್ರಶಸ್ತಿ: ವರ್ಷದ ರೈತ ಪ್ರಶಸ್ತಿಗೆ ಹರಿಮನ್ ಶರ್ಮಾ, ಮದನ್ ಲಾಲ್ ದೇವ್ರಾ, ಇಷಾಕ್ ಅಲಿ, ಮಹಿಳೆಯರಿಗೆ ನೀಡಲಾಗುವ ಕೃಷಿ ಪ್ರೇರಣಾ ಪ್ರಶಸ್ತಿ– ಅನು ತ್ಯಾಗಿ, ಯುವ ಪ್ರಶಸ್ತಿ– ಸುಶೀಲಾ ಟಿ ಮತ್ತು ಕೃಷಿ ಯಾಂತ್ರೀಕರಣ ಪ್ರಶಸ್ತಿಯನ್ನು ಜಿ. ರವಿಕಿರಣ್ ಗೌಡ ಅವರಿಗೆ ನೀಡಲಾಗಿದೆ.
‘ಕೃಷಿ ಕ್ಷೇತ್ರದ ನಿಜವಾದ ಸಾಧಕರನ್ನು ಗುರುತಿಸಲು ಈ ಪ್ರಶಸ್ತಿ ನೀಡಲಾಗುತ್ತಿದೆ. ರೈತರ ವರಮಾನ ಹೆಚ್ಚಿಸಲು ಸರ್ಕಾರ ಹಮ್ಮಿಕೊಳ್ಳುವ ಕಾರ್ಯಕ್ರಮಗಳಲ್ಲಿ ಕೈಜೋಡಿಸಲೂ ನಾವು ಸಿದ್ಧರಿದ್ದೇವೆ’ ಎಂದು ಮಹೀಂದ್ರಾ ಸಮೂಹದ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಹೇಳಿದರು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಕೃಷಿ ಶಿರೋಮಣಿ ಪ್ರಶಸ್ತಿ ₹5 ಲಕ್ಷ, ವ್ಯಕ್ತಿ ಮತ್ತು ಸಂಸ್ಥೆಗೆ ನೀಡಲಾಗುವ ರಾಷ್ಟ್ರೀಯ ಮಟ್ಟದ ಪ್ರಶಸ್ತಿ ₹2.11 ಲಕ್ಷ ಮತ್ತು ಪ್ರಾದೇಶಿಕ ಮಟ್ಟದ ಪ್ರಶಸ್ತಿಗೆ ₹51 ಸಾವಿರ ನಗದು ಬಹುಮಾನ ನಿಗದಿಪಡಿಸಲಾಗಿದೆ.