ಹುಬ್ಬಳ್ಳಿ: ವಿಧಾನ ಪರಿಷತ್ ಸದಸ್ಯ, ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಅವರ ಸಹೋದರ ಪ್ರದೀಪ ಶೆಟ್ಟರ್ ಅವರಿಗೆ ಜೀವ ಬೆದರಿಕೆ ಕರೆ ಮತ್ತು ಎಸ್ ಎಂಎಸ್ ಗಳು ಬಂದಿದ್ದು, ಈ ಕುರಿತು ಪೊಲೀಸ್ ಕಮಿಷನರ್ ಎಂ.ಎನ್.ನಾಗರಾಜ ಅವರಿಗೆ ಮಾಹಿತಿ ನೀಡಿದ್ದಾರೆ.
'ನೀವು ಹಿಂದುತ್ವ ಬೆಂಬಲಿಸಬೇಡಿ, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಲ್ಲಿ ಓಡಾಡಬೇಡಿ. ಒಂದು ವೇಳೆ ಮಾಡಿದ್ದೇ ಆದಲ್ಲಿ ಪರಿಣಾಮ ನೆಟ್ಟಗಿರೋಲ್ಲ' ಎಂಬ ಸಂದೇಶ ಮೊಬೈಲ್ ಸಂಖ್ಯೆ 9071457559 ಯಿಂದ ಬಂದಿದೆ.
'ಒಸಮಾ ಬಿನ್ ಲಾಡೆನ್ ನಮ್ಮ ದೇವರು... ದಯಮಾಡಿ ನೀವು ಉಗ್ರವಾದದ ಜೊತೆ ಕೈ ಜೋಡಿಸಿ' ಎಂದು ಸಂದೇಶದಲ್ಲಿ ಬರೆಯಲಾಗಿದೆ.
ಈ ಸಂದೇಶವನ್ನು ಸ್ಕ್ರೀನ್ ಶಾಟ್ ಮಾಡಿ ಪೊಲೀಸ್ ಕಮಿಷನರ್ ಅವರಿಗೆ ಪ್ರದೀಪ ಶೆಟ್ಟರ್ ರವಾನಿಸಿದ್ದಾರೆ.
'ಒಂದು ವಾರದಿಂದ ಬೆದರಿಕೆ ಕರೆ ಮತ್ತು ಸಂದೇಶಗಳು ಬರುತ್ತಿದ್ದವು. ಚುನಾವಣೆ ಸಂದರ್ಭದಲ್ಲಿ ಇವೆಲ್ಲಾ ಸಹಜ ಎಂದು ಗಂಭೀರವಾಗಿ ಪರಿಗಣಿಸಿರಲಿಲ್ಲ. ಬೆದರಿಕೆ ಸಂದೇಶವೊಂದು ಮತ್ತೆ ಬರಲು ಆರಂಭಿಸಿರುವುದರಿಂದ ಪೊಲೀಸ್ ಕಮಿಷನರ್ ಗೆ ದೂರು ನೀಡಲು ನಿರ್ಧರಿಸಿದ್ದೇನೆ' ಎಂದು ಪ್ರದೀಪ ಶೆಟ್ಟರ್ ಪ್ರಜಾವಾಣಿಗೆ ತಿಳಿಸಿದರು.