ರಾಮನಗರ: ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸುವ ಕುರಿತು ರಾಮನಗರ ಕಾರ್ಯಕರ್ತರ ಜತೆಗೆ ಚರ್ಚಿಸಿ ತೀರ್ಮಾನಿಸುತ್ತೇನೆ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
‘ಎರಡೂ ಕ್ಷೇತ್ರದಲ್ಲಿ ಗೆಲ್ಲುವ ಅಗತ್ಯ ಇದೆ. ಲೋಕಸಭೆ ಚುನಾವಣೆ ಸಂದರ್ಭ ಚನ್ನಪಟ್ಟಣ ಜನರೂ ನನ್ನನ್ನು ಬೆಂಬಲಿಸಿದ್ದಾರೆ. ಆದರೆ ರಾಮನಗರ ನನ್ನ ಕರ್ಮ ಭೂಮಿ. ಇಲ್ಲಿನ ಕಾರ್ಯಕರ್ತರ ಅಭಿಪ್ರಾಯ ಪಡೆದೇ ಮುಂದುವರಿಯುತ್ತೇನೆ’ ಎಂದರು.
ಇದೇ ಸಂದರ್ಭದಲ್ಲಿ ನಮ್ಮ ಕುಟುಂಬದಿಂದ ಇಬ್ಬರೇ ಸ್ಪರ್ಧೆ ಎಂಬ ವಿಚಾರವನ್ನು ಅವರು ಪುನರುಚ್ಚರಿಸಿದರು.
ಕುಮಾರಸ್ವಾಮಿ ಸಿ.ಎಂ. ಆಗುವ ಹಗಲು ಕನಸು ಕಾಣುತ್ತಿದ್ದಾರೆ ಎಂಬ ಡಿ.ಕೆ. ಸುರೇಶ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ ‘ನನ್ನನ್ನು ಅವರೇನು ಸಿ.ಎಂ. ಮಾಡುವುದಿಲ್ಲ. ರಾಜ್ಯದ ಆರು ಕೋಟಿ ಜನತೆ ಮಾಡುತ್ತಾರೆ. ಎಲ್ಲವನ್ನು ಕಾಲವೇ ನಿರ್ಧರಿಸುತ್ತದೆ’ ಎಂದು ತಿರುಗೇಟು ನೀಡಿದರು.
ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಬಿಜೆಪಿ ಸೇರ್ಪಡೆ ಕುರಿತು ಪ್ರತಿಕ್ರಿಯಿಸಿ ‘ನಮ್ಮದು ಸಣ್ಣ ಪಕ್ಷ. ಇಲ್ಲಿ ಏನೂ ಸಿಗದು ಎಂಬ ಕಾರಣಕ್ಕೆ ಅವರು ರಾಷ್ಟ್ರೀಯ ಪಕ್ಷಗಳ ಹಾದಿ ಹಿಡಿದಿದ್ದಾರೆ’ ಎಂದು ಟೀಕಿಸಿದರು.
‘ಯಾರ ಹೇಳಿಕೆ, ಸಮೀಕ್ಷೆಗಳ ಬಗ್ಗೆಯೂ ಪ್ರತಿಕ್ರಯಿಸುವುದಿಲ್ಲ. ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರುವುದಷ್ಟೇ ನನ್ನ ಗುರಿ’ ಎಂದರು.