ಸೋಮವಾರಪೇಟೆ: ‘ತಾಲ್ಲೂಕಿನಲ್ಲಿ ಮರಳು ದಂಧೆ ಎಗ್ಗಿಲ್ಲದೆ ನಡೆದಿದ್ದರೂ ತಡೆಯಲು ಅಧಿಕಾರಿಗಳು ಮುಂದಾಗು ತ್ತಿಲ್ಲ’ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ್ ಪೂಜಾರಿ ಆರೋಪಿಸಿದರು.
ಸೋಮವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ‘ಸರ್ಕಾರ ಜಿಲ್ಲೆಯಲ್ಲಿ ಮರಳು ಸಾಗಣೆಗೆ ಕಳೆದ ಎರಡು ವರ್ಷಗಳಿಂದ ಅನುಮತಿ ನೀಡುತ್ತಿಲ್ಲ. ಇನ್ನೊಂದೆಡೆ ಅಕ್ರಮವಾಗಿ ಚಟುವಟಿಕೆ ನಡೆಸಿದ್ದು, ಸರ್ಕಾರಕ್ಕೆ ನಷ್ಟವಾಗುತ್ತಿದೆ’ ಎಂದು ದೂರಿದರು.
‘ನೆಲ್ಯಹುದಿಕೇರಿಯ ಗ್ರಾಮದ ಹೊಳೆದಂಡೆಯಿಂದ ಮರಳು ಸಾಗಣೆಗೆ ಸಾಗಣೆದಾರರು ನಕಲಿ ಪರವಾನಗಿ ಬಳಸುತ್ತಿರುವುದು ಕಂಡುಬಂದಿದೆ. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿದೆ. ಅಧಿಕಾರಿ ಗಳ ಸಹಿ ದುರ್ಬಳಕೆ ಆಗಿರುವ ಆರೋಪ ವಿದ್ದು, ತನಿಖೆ ನಡೆಸಬೇಕು. ಇಲ್ಲದಿದ್ದರೆ ಜಿಲ್ಲಾಡಳಿತ ಕಚೇರಿ ಎದುರು ಪ್ರತಿಭಟಿಸಲಿದ್ದೇವೆ’ ಎಂದರು.
ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಎನ್. ದೀಪಕ್ ಅವರು, ‘ಅಕ್ರಮ ಮರಳು ಸಾಗಣೆ ವಿರುದ್ಧ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ದೂರು ನೀಡಿದ್ದರೂ, ಯಾರ ವಿರುದ್ಧವೂ ಕ್ರಮಜರುಗಿಸಿಲ್ಲ’ ಎಂದು ದೂರಿದರು.
ಜಿಲ್ಲಾ ಘಟಕದ ಕಾರ್ಯದರ್ಶಿ ಸತೀಶ್ ಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ರೂಪಾ ಸುರೇಶ್, ನಗರ ಘಟಕದ ಅಧ್ಯಕ್ಷ ಬಿ.ಎಸ್.ಮಂಜುನಾಥ್ ಇದ್ದರು.