ನವದೆಹಲಿ: ಆಧಾರ್ ಯೋಜನೆ ಬಗ್ಗೆ ಇರುವ ಅನುಮಾನಗಳನ್ನು ಪರಿಹರಿಸಲು ಪವರ್ ಪಾಯಿಂಟ್ ಪ್ರಸೆಂಟೇಶನ್ (ಪಿಪಿಟಿ) ನಡೆಸಲು ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರದ (ಯುಐಡಿಎಐ) ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ (ಸಿಇಒ) ಅವಕಾಶ ಕೊಡಬೇಕು ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ ಅನ್ನು ಕೋರಿದೆ.
ಆಧಾರ್ ಯೋಜನೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಸಂವಿಧಾನ ಪೀಠದ ನ್ಯಾಯಮೂರ್ತಿಗಳ ಜತೆ ಸಮಾಲೋಚನೆ ನಡೆಸಿ ಪಿಪಿಟಿಗೆ ಸಮಯ ನಿಗದಿ ಮಾಡುವುದಾಗಿ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹೇಳಿದ್ದಾರೆ.
ಆಧಾರ್ ಯೋಜನೆಗೆ ಸಂಬಂಧಿಸಿ ಹಲವು ತಾಂತ್ರಿಕ ಅಂಶಗಳಿವೆ. ಕಣ್ಗಾವಲು, ದತ್ತಾಂಶ ಭದ್ರತೆ, ಪ್ರಮಾಣೀಕರಣ ಆಗಿಲ್ಲ ಅಥವಾ ಆಧಾರ್ ಸಂಖ್ಯೆ ಇಲ್ಲ ಎಂಬ ಕಾರಣಕ್ಕೆ ಕೆಲವರಿಗೆ ನಿರ್ದಿಷ್ಟ ಸೌಲಭ್ಯಗಳು ದೊರೆಯದಂತೆ ಮಾಡುವುದು ಮುಂತಾದವು ಇದರಲ್ಲಿ ಸೇರಿವೆ ಎಂದು ಪೀಠ ಹೇಳಿದೆ.
ಯುಐಡಿಎಐಯ ಸಿಇಒ ತಾಂತ್ರಿಕ ವಿಚಾರಗಳ ಬಗ್ಗೆ ಬೆಳಕು ಚೆಲ್ಲಬಲ್ಲರು ಎಂದು ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ತಿಳಿಸಿದರು.