ನವದೆಹಲಿ: ಸಂಸತ್ತಿನ ಉಭಯಸದನಗಳಲ್ಲಿ ಮಂಗಳವಾರವೂ ವಿರೋಧ ಪಕ್ಷಗಳ ಅಬ್ಬರ ಮುಂದುವರಿದಿದ್ದು, ಬಜೆಟ್ ಅಧಿವೇಶನದ 13ನೇ ದಿನದ ಕಲಾಪಗಳು ಸಂಪೂರ್ಣ ವ್ಯರ್ಥವಾಗಿವೆ.
ವಿರೋಧ ಪಕ್ಷಗಳ ಪ್ರತಿಭಟನೆಯಿಂದಾಗಿ ಕೇಂದ್ರ ಸರ್ಕಾರದ ವಿರುದ್ಧ ಟಿಡಿಪಿ ಮತ್ತು ವೈಎಸ್ಆರ್ ಕಾಂಗ್ರೆಸ್ ಪಕ್ಷ ಮಂಡಿಸಿದ್ದ ಅವಿಶ್ವಾಸ ನಿರ್ಣಯ ಸತತ ನಾಲ್ಕನೇ ದಿನವೂ ಚರ್ಚೆಗೆ ಬರಲಿಲ್ಲ.
ಕಲಾಪ ಆರಂಭವಾದ ಸ್ವಲ್ಪ ಹೊತ್ತಿನಲ್ಲೇ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಎಐಎಡಿಎಂಕೆ ಮತ್ತು ಟಿಡಿಪಿ ಸದಸ್ಯರು ಪ್ರತಿಭಟನೆಗಿಳಿದರು. ಮಧ್ಯಾಹ್ನದವರೆಗೆ ಕಲಾಪ ಮುಂದೂಡಲಾಯಿತು. ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಕಾರಣ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.
ಕಲಾಪಗಳಿಗೆ ಅಡ್ಡಿಪಡಿಸಿದ ಸದಸ್ಯರ ವರ್ತನೆಗೆ ಲೋಕಸಭೆಯ ಸ್ಪೀಕರ್ ಸುಮಿತ್ರಾ ಮಹಾಜನ್ ಮತ್ತು ರಾಜ್ಯಸಭೆಯ ಸಭಾಧ್ಯಕ್ಷ ವೆಂಕಯ್ಯ ನಾಯ್ಡು ಕಿಡಿ ಕಾರಿದರು.