ಬಳಿಕ ಉದ್ಯಾನದ ಅಧಿಕಾರಿಗಳು ವೈದ್ಯರ ಸಲಹೆ ಪಡೆದು ಮರಿಗಳನ್ನು ತಾಯಿಯಿಂದ ಬೇರ್ಪಡಿಸಿ ಸಿಬ್ಬಂದಿಯೇ ಆರೈಕೆ ಮಾಡುವ ತೀರ್ಮಾನ ಕೈಗೊಂಡರು. ಅದರಂತೆ ಏಪ್ರಿಲ್ 26ರಂದು ಮೂರು ಮರಿಗಳನ್ನು ತಾಯಿಯಿಂದ ಬೇರ್ಪಡಿಸಿ ಉದ್ಯಾನದ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಆದರೆ, ಗಾಯಗೊಂಡಿದ್ದ ಗಂಡು ಮರಿಯೊಂದು ಸತ್ತು ಹೋಯಿತು. ಉಳಿದ ಎರಡು ಮರಿಗಳನ್ನು ಅತ್ಯಂತ ಜತನದಿಂದ ವೈದ್ಯಕೀಯ ಸಿಬ್ಬಂದಿ ಆರೈಕೆ ಮಾಡಿ ಪೋಷಿಸಿದ್ದು ಮರಿಗಳು ಮುದ್ದುಮುದ್ದಾಗಿ ಬೆಳೆಯುತ್ತಿವೆ. ಇದು ಬನ್ನೇರುಘಟ್ಟ ಜೈವಿಕ ಉದ್ಯಾನದ ಸಿಬ್ಬಂದಿಯಲ್ಲಿ ಸಂತಸ ತಂದಿದೆ.