ನವದೆಹಲಿ: ‘ಉದ್ಯಮಿಯ ಪುತ್ರ ವಿದ್ವತ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಬಂಧನಕ್ಕೆ ಒಳಗಾಗಿರುವ ಮೊಹಮದ್ ನಲಪಾಡ್ ಹ್ಯಾರಿಸ್, ಜಾಮೀನಿಗಾಗಿ ಅರ್ಜಿ ಸಲ್ಲಿಸಿದಲ್ಲಿ ನಮ್ಮ ವಾದವನ್ನೂ ಆಲಿಸಿ’ ಎಂದು ಕೋರಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ನಲ್ಲಿ ಬುಧವಾರ ಕೇವಿಯಟ್ ಅರ್ಜಿ ಸಲ್ಲಿಸಿದೆ.
ಫೆಬ್ರುವರಿ 17ರಂದು ಬೆಂಗಳೂರಿನ ಯು.ಬಿ. ಸಿಟಿಯಲ್ಲಿರುವ ಫರ್ಜಿ ಕೆಫೆಯಲ್ಲಿ ವಿದ್ವತ್ ಮೇಲೆ ತೀವ್ರ ಹಲ್ಲೆ ನಡೆಸಿದ್ದಲ್ಲದೆ, ನಂತರ ಮಲ್ಯ ಆಸ್ಪತ್ರೆಗೂ ನುಗ್ಗಿ ಹಲ್ಲೆಗೆ ಮುಂದಾದ ಪ್ರಕರಣವು ಸಾರ್ವಜನಿಕರಿಂದ ಟೀಕೆಗೆ ಗುರಿಯಾಗಿತ್ತು.
‘ಸರ್ಕಾರದ ವಾದ ಆಲಿಸದೆ ಶಾಸಕ ಎನ್.ಎ. ಹ್ಯಾರಿಸ್ ಅವರ ಪುತ್ರ ನಲಪಾಡ್ಗೆ ಜಾಮೀನು ನೀಡಬಾರದು’ ಎಂದು ವಕೀಲ ಸಂಜಯ್ ನುಲಿ ಅವರ ಮೂಲಕ ಸಲ್ಲಿಸಿರುವ ಕೇವಿಯಟ್ನಲ್ಲಿ ತಿಳಿಸಲಾಗಿದೆ.
‘ನಲಪಾಡ್ ಅತ್ಯಂತ ಪ್ರಭಾವಿ ವ್ಯಕ್ತಿಯಾಗಿದ್ದು, ಜಾಮೀನಿನ ಮೇಲೆ ಜೈಲಿನಿಂದ ಹೊರಬಂದರೆ, ನಿಸ್ಸಂಶಯವಾಗಿ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯ ನಾಶಪಡಿಸುವ ಸಾಧ್ಯತೆ ಇದೆ’ ಎಂದು ಅಭಿಪ್ರಾಯಪಟ್ಟಿದ್ದ ರಾಜ್ಯ ಹೈಕೋರ್ಟ್, ಇದೇ 14ರಂದು ಜಾಮೀನು ಅರ್ಜಿ ತಿರಸ್ಕರಿಸಿತ್ತು.
ನಲಪಾಡ್ ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು ವಿದ್ವತ್ ಮೇಲೆ ತೀವ್ರ ಹಲ್ಲೆ ನಡೆಸಿದ್ದಾಗಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಔದಾರ್ಯ ತೋರಿ ಜಾಮೀನು ಮಂಜೂರು ಮಾಡಿದಲ್ಲಿ ಆರೋಪಿಯು ಜೈಲಿನಿಂದ ಹೊರಬಂದು, ತನಿಖಾ ಹಂತದಲ್ಲಿರುವ ಈ ಪ್ರಕರಣಕ್ಕೆ ಸಂಬಂಧಿ
ಸಿದಂತೆ ಪ್ರಭಾವ ಬಳಸಿ ಸಾಕ್ಷ್ಯ ನಾಶಪಡಿಸಬಹುದು’ ಎಂಬ ಆತಂಕವನ್ನು ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಅವರಿದ್ದ ಹೈಕೋರ್ಟ್ನ ಏಕ ಸದಸ್ಯ ನ್ಯಾಯಪೀಠವು ವ್ಯಕ್ತಪಡಿಸಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.