ಮೈಸೂರು: ‘ಸಿದ್ದರಾಮಯ್ಯ... ಅಖಾಡಕ್ಕೆ ಇಳಿಯೋಣ ಬಾ. ಗೆಲುವು ಯಾರಿಗೆ ಎಂಬುದನ್ನು ನೋಡೋಣ’ ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪಂಥಾಹ್ವಾನ ನೀಡಿದರು.
ಮೈಸೂರಿನಲ್ಲಿ ಗುರುವಾರ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ನನಗೆ ಈಗ 85 ವರ್ಷ ವಯಸ್ಸು. ಸಿದ್ದರಾಮಯ್ಯನಿಗೆ 61 ಅಥವಾ 62 ವರ್ಷ ಇರಬಹುದು. ಆದರೂ ನನ್ನಲ್ಲಿ ಶಕ್ತಿ ಕಡಿಮೆಯಾಗಿಲ್ಲ. ನಿನ್ನ ಅಹಂಕಾರ, ಸೊಕ್ಕನ್ನು ಮುರಿಯಲು ರಾಜ್ಯದ ಜನರು ನನ್ನೊಂದಿಗಿದ್ದಾರೆ’ ಎಂದು ಕಿಡಿಕಾರಿದರು.
ಎಲ್ಲೋ ಇದ್ದ ಸಿದ್ದರಾಮಯ್ಯ ಅವರನ್ನು ರಾಜಕೀಯದಲ್ಲಿ ಬೆಳೆಸಿದ್ದು ಯಾರು ಎಂಬುದು ರಾಜ್ಯದ ಜನರಿಗೆ ಗೊತ್ತಿದೆ. ಕನಿಷ್ಠಪಕ್ಷ ಉಪಕಾರ ಸ್ಮರಣೆ, ಕೃತಜ್ಞತೆ ಇರಬೇಕು. ಆದರೆ ಮುಖ್ಯಮಂತ್ರಿಗೆ ಯಾವುದೂ ಇಲ್ಲ ಎಂದು ಜರೆದರು.
ದುರಂಹಕಾರ ಮತ್ತು ಅಧಿಕಾರದ ಮದ ಬಹಳಷ್ಟು ದಿನ ಉಳಿಯುವುದಿಲ್ಲ. ಇನ್ನೆರಡು ತಿಂಗಳಲ್ಲಿ ಎಲ್ಲವೂ ಕೊನೆಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.