ಪಟ್ನಾ: ‘ಬಿಹಾರದಲ್ಲಿ ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ಪ್ರಯತ್ನಗಳಿಂದ ದೂರವಿರಬೇಕು’ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಿಜೆಪಿಗೆ ಕಠಿಣ ಸಂದೇಶ ನೀಡಿದ್ದಾರೆ.
ಚಂಪಾರಣ್ಯ ಸತ್ಯಾಗ್ರಹದ ಶತಮಾನೋತ್ಸವ ಅಂಗವಾಗಿ ಗುರುವಾರ ಇಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಈ ಸಂದೇಶ ರವಾನಿಸಿದ್ದಾರೆ. ಈ ಸಮಾರಂಭದಲ್ಲಿ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು, ಉಪಮುಖ್ಯಮಂತ್ರಿ ಸುಶೀಲ್ ಮೋದಿ ಸಹ ಉಪಸ್ಥಿತರಿದ್ದರು.
‘ರಾಮನವಮಿಯ ಶುಭ ಸಂದರ್ಭದಲ್ಲಿ ಎಲ್ಲರಿಗೂ ಶುಭಾಶಯ ಕೋರುತ್ತೇನೆ. ಆದರೆ, ಶಾಂತಿಪ್ರಿಯ ಈ ರಾಜ್ಯದಲ್ಲಿ ಕೋಮುಗಲಭೆ ನಡೆಸಲು ಕೆಲವು ಶಕ್ತಿಗಳು ಪ್ರಯತ್ನಿಸುತ್ತಿವೆ. ಇಂತಹ ಪ್ರಯತ್ನಗಳಿಂದ ದೂರವಿರಬೇಕು ಎಂದು ಇದೇ ಸಂದರ್ಭದಲ್ಲಿ ಕೋರುತ್ತೇನೆ’ ಎಂದು ನಿತೀಶ್ ಕುಮಾರ್ ಬಿಜೆಪಿ ಹೆಸರು ಪ್ರಸ್ತಾಪಿಸದೆ ಹೇಳಿದರು.
‘ದಸರಾ ಮತ್ತು ಮೊಹರಂ ಸಂದರ್ಭದಲ್ಲೂ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಪ್ರಯತ್ನಗಳನ್ನು ನಡೆಸಲಾಗಿತ್ತು. ಆದರೆ, ಸಮರ್ಪಕ ಕಾನೂನು ಮತ್ತು ಸುವ್ಯವಸ್ಥೆಯಿಂದಾಗಿ ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡಲಿಲ್ಲ. ಹೀಗಾಗಿ, ಆರಂಭದಲ್ಲೇ ಸೌಹಾರ್ದತೆಗೆ ಧಕ್ಕೆ ತರುವುದನ್ನು ಹತ್ತಿಕ್ಕಲಾಯಿತು’ ಎಂದು ತಿಳಿಸಿದರು.