ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ವರ ಕಲ್ಯಾಣ ಬಯಸಿದ ಶರಣರು

ಬಸವಣ್ಣನವರ ಅಶ್ವಾರೂಢ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಡಾ.ಶರಣಬಸಪ್ಪ ಅಪ್ಪಾ ಹೇಳಿಕೆ
Last Updated 23 ಮಾರ್ಚ್ 2018, 7:11 IST
ಅಕ್ಷರ ಗಾತ್ರ

ಆಳಂದ: ‘12ನೇ ಶತಮಾನದ ಬಸವಾದಿ ಶರಣರು ದೇವಸ್ಥಾನ, ಗುಡಿಗಳಿಗೆ ದೇವರನ್ನು ಸೀಮಿತಗೊಳಿಸದೆ ಜಗತ್ತಿನ ಸರ್ವ ಜೀವಸಂಕುಲದ ಕಲ್ಯಾಣವನ್ನು ಬಯಸಿ ಮಹಾತ್ಮರಾಗಿ ನಮ್ಮೆಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ’ ಎಂದು ಕಲಬುರ್ಗಿಯ ಡಾ.ಶರಣಬಸಪ್ಪ ಅಪ್ಪಾ ನುಡಿದರು.

ತಾಲ್ಲೂಕಿನ ಹಿತ್ತಲ ಶಿರೂರು ಗ್ರಾಮದಲ್ಲಿ ಗುರುವಾರ ವಿಶ್ವಗುರು ಬಸವಣ್ಣನವರ ಮೂರ್ತಿ ಪ್ರತಿಷ್ಠಾನ ಹಾಗೂ ಗ್ರಾಮಸ್ಥರಿಂದ ಬಸವಣ್ಣನವರ ಭವ್ಯ ಅಶ್ವಾರೂಢ ಪ್ರತಿಮೆಯ ಅನಾವರಣ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.

‘ಬಸವಣ್ಣನವರ ಸಮಾನತೆ, ಕಾಯಕ ಹಾಗೂ ದಾಸೋಹ ತತ್ವಗಳು ನಾವೂ ಆಚರಣೆಗೆ ತಂದರೆ ಜಗತ್ತಿನಲ್ಲಿ ಯಾರೂ ಉಪವಾಸ ಬೀಳುವದಿಲ್ಲ. ಸಾಲಬಾಧೆಯಿಂದ ಆತ್ಮಹತ್ಯೆಯೂ ಮಾಡಿಕೊಳ್ಳಲಾರರು. ಆದರೆ, ರೈತರು ಮತ್ತು ಯುವಕರು ದುಶ್ಚಟಗಳಿಗೆ ಬಳದೆ ಕಾಯಕದಲ್ಲಿ ಸಂತೃಪ್ತಿಯ ಜೀವನ ನಡೆಸಬೇಕು’ ಎಂದು ಕಿವಿಮಾತು ಹೇಳಿದರು.

ಶಾಸಕ ಬಿ.ಆರ್.ಪಾಟೀಲ ಮಾತನಾಡಿ, ‘ಬಸವಣ್ಣನವರು ವ್ಯಕ್ತಿ ಅಲ್ಲ, ಅವರೊಂದು ವಿಚಾರ ಮತ್ತು ಆದರ್ಶ ಬದುಕಿನ ಸ್ಫೂರ್ತಿಯಾಗಿದ್ದಾರೆ. ಜಾತಿ ವ್ಯವಸ್ಥೆ, ಮೌಢ್ಯಾಚರಣೆಗಳ ನಿರ್ಮೂಲನೆಗೆ ಶರಣರ ಸಂಘರ್ಷದಿಂದ ನಮ್ಮಲ್ಲಿ ಹೊಸ ಪರಿವರ್ತನೆ ಬರುವಂತಾಯಿತು’ ಎಂದರು.

‘ಆಳಂದ ತಾಲ್ಲೂಕಿನ ಭೌತಿಕ ಅಭಿವೃದ್ಧಿ ಜೊತೆಗೆ ಸಾಮಾಜಿಕ ಸಾಮರಸ್ಯ, ಶಾಂತಿಯುತ ಬದುಕು ಕಟ್ಟಲು ನಮಗೆ ಬುದ್ಧ, ಬಸವಣ್ಣ, ಡಾ.ಅಂಬೇಡ್ಕರ್ ಸೇರಿದಂತೆ ಎಲ್ಲ ಮಹಾತ್ಮರು, ಸೂಫಿಗಳು ಹಾಗೂ ಸಮಾಜ ಸುಧಾರಕರಿಂದ ಪ್ರೇರಣೆ ಪಡೆದುಕೊಳ್ಳಬೇಕಿದೆ’ ಎಂದು ಹೇಳಿದರು.

ಚಿನ್ಮಯಗಿರಿಯ ಸಿದ್ಧರಾಮ ಸ್ವಾಮೀಜಿ, ಮಾಡಿಯಾಳದ ಮರುಳಸಿದ್ದ ಸ್ವಾಮೀಜಿ, ಸರಡಗಿಯ ರೇವಣಸಿದ್ದ ಸ್ವಾಮೀಜಿ, ಬಟ್ಟರ್ಗಾದ ಸೈಯದ್ ಭಾಷಾಸಾಬ ಮುತ್ತ್ಯಾ, ಹಿತ್ತಲ ಶಿರೂರನ ಗರೀಬ ಶಾಹಾಲಿ ಮುತ್ತ್ಯಾ, ವಿಧಾನ ಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ, ಜಿ.ಪಂ ಸದಸ್ಯ ಸಿದ್ದರಾಮ ಪ್ಯಾಟಿ, ಮುಖಂಡ ಗುರುಶರಣ ಪಾಟೀಲ, ರಾಷ್ಟ್ರೀಯ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಪ್ರಭುಲಿಂಗ ಮಹಾಗಾಂವಕರ, ಆರ್.ಜಿ.ಶೇಟಗಾರ, ಶರಣು ಭೂಸನೂರು, ರಾಜಶೇಖರ ಯಕಂಚಿ, ಭೀಮಣ್ಣಾ ಬನಪಟ್ಟಿ, ಕಲ್ಮೇಶ ಪಾಟೀಲ, ಸಂಗಣ್ಣಾ ಸನಗುಂದಿ, ಮಲ್ಲಿನಾಥ ಫುಲಾರೆ, ಕಲ್ಯಾಣಿ ಉಪ್ಪಿನ, ಮಹಾದೇವಪ್ಪ ಪೂಜಾರಿ, ಕಾಶಿನಾಥ ಕಂಬಾರ, ಅಶೋಕ ಮಡಿವಾಳ, ಗುರುಲಿಂಗಯ್ಯ ಸ್ವಾಮಿ, ಶರಣಕುಮಾರ ಶಾಸ್ತ್ರಿ,ಶ್ರೀಮಂತ ವಾಗ್ದರ್ಗಿ,ಕಾಂತು ಒಡೆಯರ, ರಾಜಶೇಖರ ಸನಗಂದಿ, ಗುರುಬಸವ ಪಾಟೀಲ, ಶಿವಶರಣ ಪೂಜಾರಿ, ಹಣಮಂತ ವಾರದ, ರಾಮಣ್ಣಾ ಸುತಾರ ಇದ್ದರು.

ನಂತರ ಒಂಬತ್ತು ಅಡಿ ಎತ್ತರದ ಭವ್ಯವಾದ ಬಸವಣ್ಣನವರ ಅಶ್ವಾರೂಢ ಪ್ರತಿಮೆಯ ಅನಾವರಣ ಜರುಗಿತು. ಮಹಾದೇವಪ್ಪ ಪೂಜಾರಿ, ಗುರುಲಿಂಗಯ್ಯ ಸ್ವಾಮಿ, ಶರಣಕುಮಾರ ಶಾಸ್ತ್ರಿ, ಶಿವಶರಣ ಪೂಜಾರಿ ಮತ್ತಿತರ ಕಲಾವಿದರು ನಡೆಸಿಕೊಟ್ಟ ವಚನ ಗಾಯನ, ಮೆರವಣಿಗೆಯಲ್ಲಿ ಯುವಕರ ಡೊಳ್ಳು ಕುಣಿತ ಗಮನ ಸೆಳೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT