ಬೈಲಹೊಂಗಲ: ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಆಧಾರ ಕಾರ್ಡ್ ನೋಂದಣಿ, ಹೆಸರು ತಿದ್ದುಪಡಿಗೆ ಬಂದಿದ್ದ ನೂರಾರು ಅರ್ಜಿದಾರರು ಕಂಪ್ಯೂಟರ್ ಸಿಬ್ಬಂದಿ ಕಾರ್ಯ ವೈಖರಿ ಖಂಡಿಸಿ ಶುಕ್ರವಾರ ದಿಢೀರ್ ಪ್ರತಿಭಟನೆ ನಡೆಸಿ ಅಧಿಕಾರಿಗಳಿಗೆ ಧಿಕ್ಕಾರ ಕೂಗಿದರು.
‘ಬೆಳಿಗ್ಗೆಯಿಂದ ರಾತ್ರಿಯವರೆಗೆ ಬಂದು ನಿಂತರೂ ಆಧಾರ ಕಾರ್ಡ್ ಲಭ್ಯವಾಗುತ್ತಿಲ್ಲ. ತಿದ್ದುಪಡಿ, ನೋಂದಣಿ, ಹೆಸರು ಸೇರ್ಪಡೆಗೆ ಹರಸಾಹಸ ಪಡಬೇಕಾಗಿದೆ. ಕಂಪ್ಯೂಟರ್ ಸಿಬ್ಬಂದಿ ಸರಿಯಾಗಿ ಸ್ಪಂದಿಸುತ್ತಿಲ್ಲ. ಕೇಳಿದರೆ ಸರ್ವರ್ ಸಮಸ್ಯೆ, ನೆಟವರ್ಕ್ ಇಲ್ಲ. ನಾಳೆ, ನಾಡಿದ್ದು ಬನ್ನಿ ಎಂದು ಸಮಜಾಯಿಷಿ ನೀಡುತ್ತಾರೆ. ಇದನ್ನು ಪ್ರಶ್ನಿಸಿ ತಹಶೀಲ್ದಾರ್, ಶಿರಸ್ತೇದಾರ್ ಬಳಿ ಹೋದರೂ ಪ್ರಯೋಜನವಾಗುತ್ತಿಲ್ಲ’ ಎಂದು ಅರ್ಜಿದಾರರು ಆರೋಪಿಸಿದರು.
ಚಿವಟಗುಂಡಿ ಗ್ರಾಮದ ಅರ್ಜಿದಾರ ಬಸವರಾಜ ಕೆಂಚನಗೌಡರ ಮಾತನಾಡಿ, ‘ಆಧಾರ್ ನೋಂದಣಿಗಾಗಿ ಮುಂಜಾನೆಯಿಂದಲೇ ತಾಲ್ಲೂಕಿನ ಜನತೆ ತಹಶೀಲ್ದಾರ್ ಕಚೇರಿ ಎದುರು ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಲ್ಲುವಂತಾಗಿದೆ. ತಹಶೀಲ್ದಾರ್ ಅವರು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಬಡವರು ಮತ್ತು ತಳಮಟ್ಬದ ಸಿಬ್ಬಂದಿ ಬಗ್ಗೆ ಅಧಿಕಾರಿಗಳಿಗೆ ಕಾಳಜಿ ಇಲ್ಲವಾಗಿದೆ. ಬಿಸಿಲಿನ ಬೇಗೆಯಿಂದ ಸಿಬ್ಬಂದಿ ಕಂಗೆಟ್ಟಿದ್ದಾರೆ. ಅವರಿಗೆ ಸರಿಯಾದ ಕುಡಿಯುವ ನೀರು, ಕಂಪ್ಯೂಟರ್, ಪ್ರಿಂಟರ್, ಫ್ಯಾನ್ ಸೌಲಭ್ಯ ಇಲ್ಲವಾಗಿದೆ. ಅವುಗಳನ್ನು ಒದಗಿಸಿಕೊಡಬೇಕು’ ಎಂದು ಒತ್ತಾಯಿಸಿದರು.
ವೀರಭದ್ರಪ್ಪ ಮಲ್ಲೂರ ಮಾತನಾಡಿ, ‘ಕಳೆದ ಕೆಲವು ತಿಂಗಳುಗಳಿಂದ ನಡೆಯುತ್ತಿರುವ ಆಧಾರ್ ಕಾರ್ಡ್ ನೋಂದಣಿ ಪ್ರಕ್ರಿಯೆಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚುತ್ತಿದೆ. ಹಣ ಕೊಟ್ಟವರಿಗೆ ಬೇಗ ಕೆಲಸಗಳು ಆಗುತ್ತಿವೆ. ಹಣ ಕೊಡದವರನ್ನು ಸತಾಯಿಸಲಾಗುತ್ತಿದೆ. ಈ ಕುರಿತು ಜಿಲ್ಲಾಧಿಕಾರಿ ಗಮನ ಹರಿಸಿ ಬಡವರಿಗೆ, ಅರ್ಹ ಫಲಾನುಭವಿಗಳಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಿ ಸರ್ಕಾರದ ಸವಲತ್ತುಗಳನ್ನು ಬಡ ಜನತೆಗೆ ತಲುಪುವಂತೆ ಮಾಡಬೇಕು’ ಎಂದು ಒತ್ತಾಯಿಸಿದರು.