ಉಡುಪಿ: ಜಿಪಿಎಸ್ ವ್ಯವಸ್ಥೆ ರದ್ದು ಪಡಿಸುವಂತೆ ಒತ್ತಾಯಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾ ಟಿಪ್ಪರ್ ಮಾಲೀಕರು ಮತ್ತು ಚಾಲಕರ ಸಂಘದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಗುರು ವಾರ ಪ್ರತಿಭಟನೆ ನಡೆಸಿದರು.
ಕಾರಣಾಂತರಗಳಿಂದ ಸತತ 18 ತಿಂಗಳುಗಳ ಕಾಲ ಜಿಲ್ಲೆಯಲ್ಲಿ ಮರಳು ಗಾರಿಕೆ ಸ್ಥಗಿತವಾಗಿದ್ದ ಕಾರಣ ತೀವ್ರ ತೊಂದರೆ ಅನುಭವಿಸಬೇಕಾಯಿತು. ಕಾರ್ಮಿಕರಂತೂ ಕೆಲಸ ಇಲ್ಲದೆ ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾ ಯಿತು. ಕೆಲ ತಿಂಗಳುಗಳ ಹಿಂದೆ ಪುನಹ ಮರಳುಗಾರಿಕೆ ಆರಂಭವಾಗಿದೆ. ಆದರೆ ಈಗಿನ ಬೆಳವಣಿಗೆ ಗಮನಿಸಿದರೆ ಹೆಸರಿಗೆ ಮಾತ್ರ ಪ್ರಾರಂಭವಾದಂತಿದೆ. ಅದು ಯಾವಾಗಲಾದರೂ ಸ್ಥಗಿತಗೊಳ್ಳುವ ಭೀತಿ ಇದೆ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದರು.
ಮರಳು ಸಾಗಾಟಕ್ಕೆಂದು ಅಳವಡಿ ಸಿದ ಜಿಪಿಎಸ್ನಿಂದಾಗಿ ಹಲವು ರೀತಿಯ ತೊಂದರೆ ಎದುರಿಸಬೇಕಾಗಿದೆ. ಆ ಸಾಧನಕ್ಕೆ ₹10,000 ದುಬಾರಿ ಮೊತ್ತ ತೆರಬೇಕಾಗಿದೆ. ಕಡಿಮೆ ದರದ ಸಾಧನ ಖರೀದಿಸಲು ಅವಕಾಶ ಕೊಡಿ ಎಂದರೂ ಜಿಲ್ಲಾಡಳಿತ ಬೇಡಿಕೆ ಮನ್ನಿಸಲಿಲ್ಲ. ಅದರಲ್ಲಿ ಇರುವ ಲೋಪ ಗಳಿಂದಾಗಿ ನ್ಯಾಯಯುತವಾಗಿ ಮರಳು ಸಾಗಿಸಿದರೂ ದಂಡ ಕಟ್ಟಬೇಕಾದ ಪರಿ ಸ್ಥಿತಿ ಎದುರಾಗುತ್ತದೆ ಎಂದು ಅಳಲು ತೋಡಿಕೊಂಡರು.
ಹೆಚ್ಚು ಓದಿಲ್ಲದ ಲಾರಿ ಚಾಲ ಕರು ಅಗತ್ಯ ಇದ್ದಾಗ ಬ್ಯಾಟರಿ ಸಂಪರ್ಕ ತೆಗೆದರೂ ಅದನ್ನು ಅಕ್ರಮ ಮರಳುಗಾರಿಕೆ ಎಂದು ಪರಿಗಣಿಸ ಲಾಗುತ್ತಿದೆ. ಬೇರೆ ಯಾವುದೋ ಊರಿಗೆ ಹೋಗಿ ಬಂದಿರುವುದಾಗಿ ಶಂಕಿಸಲಾಗುತ್ತಿದೆ. ಪರಿಣಾಮ ಮರಳು ಗಾರಿಕೆ ನಂಬಿಕೊಂಡು ಬದುಕುತ್ತಿರುವ ಅನೇಕ ಬಡ ಕೂಲಿ ಕಾರ್ಮಿಕರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಕಲ್ಲು ಗಣಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಬಡ ಕೂಲಿ ಕಾರ್ಮಿಕರು ಕೆಲಸ ಕಳೆದುಕೊಳ್ಳುವ ಸ್ಥಿತಿ ತಲುಪಿದ್ದಾರೆ ಎಂದರು.
ಈ ಕೂಡಲೇ ಜಿಪಿಎಸ್ ವ್ಯವಸ್ಥೆ ರದ್ದುಗೊಳಿಸಬೇಕು. ಎಂ– ಸ್ಯಾಂಡ್ ಮತ್ತು ಮಲೇಷಿಯಾ ಮರಳಿನ ಲಾಬಿ ಎದ್ದು ಕಾಣುತ್ತಿದ್ದು, ಅದರ ಹಿಂದೆ ಪ್ರಭಾವಿ ರಾಜಕಾರಣಿಗಳು ಇದ್ದಾರೆ. ಟಿಪ್ಪರ್ ಮಾಲೀಕರು, ಚಾಲಕರು ಹಾಗೂ ಕೂಲಿ ಕಾರ್ಮಿಕರ ಹಿತದೃಷ್ಟಿಯಿಂದ ಅಂತಹ ಲಾಬಿಯನ್ನು ನಿಲ್ಲಿಸಬೇಕು. ಜಿಲ್ಲೆಗೆ ಎಂ– ಸ್ಯಾಂಡ್, ಮಲೇಷಿಯಾ ಮರಳು ಸರಿ ಹೊಂದುವುದಿಲ್ಲ ಎಂಬುದನ್ನು ಮನಗಾಣಬೇಕು. ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾಡಳಿತದ ಮೊಂಡು ವಾದ ದಿಂದ ಈ ಸಮಸ್ಯೆಯಾಗುತ್ತಿದೆ. ಕಾರ್ಮಿ ಕರ ಮೇಲೆ ಪ್ರಕರಣ ದಾಖಲಿಸಿ ಬಳ್ಳಾರಿ ಜೈಲಿಗೆ ಕಳುಹಿಸಲಾಗುತ್ತಿದೆ ಎಂದು ಮಾಜಿ ಶಾಸಕ ಕೆ. ರಘುಪತಿ ಭಟ್ ಹೇಳಿದರು. ಸಂಘಟನೆ ಅಧ್ಯಕ್ಷ ಗುಣಕರ ಶೆಟ್ಟಿ, ಉಪಾಧ್ಯಕ್ಷ ಸತೀಶ್ಚಂದ್ರ ಶೆಟ್ಟಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.