ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚೆಗೆ ಗ್ರಾಸವಾದ ಮರಳು ಸಮಸ್ಯೆ

ಸಾಗರ ತಾಲ್ಲೂಕು ಪಂಚಾಯ್ತಿ ಸಾಮಾನ್ಯಸಭೆಯಲ್ಲಿ ಪ್ರತಿಧ್ವನಿ
Last Updated 23 ಮಾರ್ಚ್ 2018, 12:41 IST
ಅಕ್ಷರ ಗಾತ್ರ

ಸಾಗರ: ತಾಲ್ಲೂಕಿನ ಎಲ್ಲೆಡೆ ಉಂಟಾಗಿರುವ ಮರಳು ಪೂರೈಕೆ ಸಮಸ್ಯೆ ಕುರಿತು ಗುರುವಾರ ನಡೆದ ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಿತು.

ಮರಳು ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ತಾಲ್ಲೂಕು ಆಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಎಲ್ಲಾ ಸದಸ್ಯರು ಪಕ್ಷಭೇದ ಮರೆತು ಒತ್ತಾಯಿಸಿದರು.

ತಾಲ್ಲೂಕಿನ ಆನಂದಪುರ ಸಮೀಪದ ಹೆಬ್ಬೋಡಿ ಗ್ರಾಮದಲ್ಲಿ ಸರ್ಕಾರಿ ಯೋಜನೆಯೊಂದರ ಕಾಮಗಾರಿಗಾಗಿ ಸಂಗ್ರಹಿಸಿಡಲಾಗಿದ್ದ ಅಪಾರ ಪ್ರಮಾಣದ ಮರಳನ್ನು ಪ್ರಭಾವಿ ವ್ಯಕ್ತಿಯೊಬ್ಬರು ಅನಧಿಕೃತವಾಗಿ ಸಾಗಾಣಿಕೆ ಮಾಡಿದ್ದಾರೆಂದು ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೂ ಯಾವುದೇ ಕ್ರಮ ಜರುಗಿಸದೆ ಇರುವ ಬಗ್ಗೆ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ವಿಷಯ ಪ್ರಸ್ತಾಪಿಸಿದ ಆಡಳಿತ ಪಕ್ಷದ ಸದಸ್ಯೆ ಜ್ಯೋತಿ ಮುರಳೀಧರ್‌ ಮಾತನಾಡಿ, ‘ಹೆಬ್ಬೋಡಿ ಗ್ರಾಮದಲ್ಲಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಮರಳನ್ನು ಅಕ್ರಮವಾಗಿ ಸಾಗಾಣಿಕೆ ಮಾಡುವವರನ್ನು ಗ್ರಾಮಸ್ಥರೇ ಹಿಡಿದುಕೊಟ್ಟಿದ್ದಾರೆ. ಆದರೂ ಪೊಲೀಸ್‌ ಇಲಾಖೆ ತಪ್ಪಿತಸ್ಥರ ವಿರುದ್ಧ ಆರೋಪಪಟ್ಟಿ ಸಲ್ಲಿಸದೆ ಇರುವುದಕ್ಕೆ ಕಾರಣವೇನು’ ಎಂದು ಪ್ರಶ್ನಿಸಿದರು.

‘ಬಡ ಹಾಗೂ ಮಧ್ಯಮ ವರ್ಗದವರು ತಮ್ಮ ಮನೆ ನಿರ್ಮಾಣಕ್ಕಾಗಿ ಚಿಕ್ಕ ವಾಹನಗಳಲ್ಲಿ ಮರಳು ಸಾಗಿಸುತ್ತಿದ್ದು, ಪೊಲೀಸರು ಕೇಸು ದಾಖಲಿಸಿ ಅಂತಹವರನ್ನು ಜೈಲಿಗೆ ಕಳುಹಿಸುತ್ತಾರೆ. ಆದರೆ ಲಕ್ಷಾಂತರ ರೂಪಾಯಿ ಮರಳನ್ನು ಅಕ್ರಮವಾಗಿ ಸಾಗಿಸುವವರ ಮೇಲೆ ಕೇಸು ದಾಖಲಿಸುತ್ತಿಲ್ಲ’ ಎಂದು ವಿಪಕ್ಷ ಬಿಜೆಪಿ ಸದಸ್ಯ ದೇವೇಂದ್ರಪ್ಪ ದೂರಿದರು.

ತಲವಾಟ ಗ್ರಾಮ ಪಂಚಾಯ್ತಿ ಅಧ್ಯಕ್ಷ ರತ್ನಾಕರ್‌ ಜೈನ್ ಮಾತನಾಡಿ, ‘ಮರಳು ಸಮಸ್ಯೆಯಿಂದ ತಾಲ್ಲೂಕಿನ ಹಲವೆಡೆ ಸರ್ಕಾರದಿಂದ ಮನೆ ಮಂಜೂ
ರಾಗಿದ್ದರೂ ಅದನ್ನು ನಿರ್ಮಿಸಲು ಸಾಧ್ಯ
ವಾಗುತ್ತಿಲ್ಲ. ನನ್ನ ಪಂಚಾಯ್ತಿ ವ್ಯಾಪ್ತಿ
ಯಲ್ಲೇ 20 ಮನೆಗಳನ್ನು ನಿರ್ಮಿಸಲು ಸಾಧ್ಯವಾಗದೆ ಇರುವುದರಿಂದ ಬಂದ ಹಣ ವಾಪಸ್‌ ಹೋಗಿದೆ’ ಎಂದು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಹಾಜರಿದ್ದ ಡಿವೈಎಸ್‌ಪಿ ಮಂಜುನಾಥ್ ಕವರಿ ಮಾತನಾಡಿ, ‘ಹೆಬ್ಬೋಡಿ ಗ್ರಾಮದ ಮರಳು ಸಾಗಾಣಿಕೆ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ಜಿಲ್ಲಾಡಳಿತದ ಆದೇಶದ ಪ್ರಕಾರ ಮರಳು ಸಾಗಾಣಿಕೆ ಮಾಡುವವರ ಮೇಲೆ ಪ್ರಕರಣ ದಾಖಲಿಸಲಾಗುತ್ತಿದೆ. ನಮಗೆ ಯಾರ ಮೇಲೂ ವೈಯಕ್ತಿಕ ದ್ವೇಷವಿಲ್ಲ. ಜಿಲ್ಲಾಡಳಿತ ಈ ಸಂಬಂಧ ಸ್ಪಷ್ಟ ಸೂಚನೆ ನೀಡಿದರೆ ಅದನ್ನು ಪಾಲಿಸುತ್ತೇವೆ’ ಎಂದು ಹೇಳಿದರು.

‘ಮರಳು ಸಾಗಾಣಿಕೆ ಮಾಡಿ ಪ್ರಕರಣ ದಾಖಲಾದರೆ ಅಂತಹವರನ್ನು ರೌಡಿಗಳ ಪಟ್ಟಿಗೆ ಸೇರಿಸಲಾಗುತ್ತಿದೆ. ಇದರಿಂದ ರೌಡಿಶೀಟರ್‌ ಎನ್ನುವ ಪದಕ್ಕೆ ಮಹತ್ವವೇ ಇಲ್ಲದಂತಾಗಿದೆ. ಆರಕ್ಷಕ ಇಲಾಖೆ ಈ ಬಗ್ಗೆ ಪರಿಶೀಲಿಸಬೇಕು’ ಎಂದು ಜೆಡಿಎಸ್‌ ಸದಸ್ಯ ಅಶೋಕ್‌ ಬರದವಳ್ಳಿ ಒತ್ತಾಯಿಸಿದರು.

‘ಅರಣ್ಯ ಇಲಾಖೆಯಲ್ಲಿ ಈ ಹಿಂದೆ ನಡೆದಿದೆ ಎನ್ನಲಾದ ಹಸಿರೀಕರಣ ಹಾಗೂ ನೆಡುತೋಪು ನಿರ್ಮಾಣ ಯೋಜನೆ ಕಾಮಗಾರಿಯಲ್ಲಿನ ಅವ್ಯವ
ಹಾರದ ತನಿಖೆ ಎಲ್ಲಿಗೆ ಬಂದಿದೆ’ ಎಂದು ಕಲಸೆ ಚಂದ್ರಪ್ಪ ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ‘ಈಗಾಗಲೇ ಹಗರಣದ ಕುರಿತು ಮಧ್ಯಂತರ ವರದಿ ಬಂದಿದ್ದು, ಲೋಪ ನಡೆದಿರುವುದು ಎದ್ದು ಕಾಣುತ್ತಿದೆ. ಪೂರ್ಣ ಪ್ರಮಾಣದ ತನಿಖಾ ವರದಿ ಇನ್ನೂ ಬರಬೇಕಿದೆ’ ಎಂದು ತಿಳಿಸಿದರು.

ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಕೆ.ಎಚ್‌.ಪರಶುರಾಮ್‌, ಕಾರ್ಯನಿರ್ವಹಣಾಧಿಕಾರಿ ಡಾ.ಎಸ್‌.ಕಲ್ಲಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT