ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು– ಬೆಂಗಳೂರು ಸ್ಕೈಬಸ್ ಯೋಜನೆಗೆ ಸಿದ್ಧ

Last Updated 24 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು–ಮೈಸೂರು ನಡುವೆ ವಿದ್ಯುತ್ ಚಾಲಿತ ಸ್ಕೈಬಸ್ ಸಂಚಾರ ಆರಂಭಿಸಲು ಕೇಂದ್ರ ಸರ್ಕಾರ ಉತ್ಸುಕವಾಗಿದ್ದು, ರಾಜ್ಯ ಒಪ್ಪಿದರೆ ಯೋಜನೆ ಕಾರ್ಯಗತಗೊಳಿಸಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ತಿಳಿಸಿದರು.

ಬಹು ನಿರೀಕ್ಷಿತ 10 ಲೇನ್‌ಗಳ ಬೆಂಗಳೂರು– ಮೈಸೂರು ಎಕ್ಸ್‌ಪ್ರೆಸ್‌ ಹೆದ್ದಾರಿ ಯೋಜನೆಗೆ ಶನಿವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಈ ಯೋಜನೆಯನ್ನು ದೆಹಲಿಯಲ್ಲಿ ಆರಂಭಿಸಲಾಗುತ್ತಿದ್ದು, ಏಪ್ರಿಲ್ 15 ರಂದು ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ. ಗಾಳಿಯಲ್ಲಿ ತೇಲಿದಂತೆ ಪ್ರಯಾಣ ಮಾಡುವ ಅನುಭವ ಪ್ರಯಾಣಿಕರಿಗೆ ಸಿಗಲಿದೆ ಎಂದು ಗಡ್ಕರಿ ಹೇಳಿದರು.

ಒಂದು ಕಿಲೋ ಮೀಟರ್ ಮೆಟ್ರೊ ರೈಲು ಯೋಜನೆಗೆ ₹ 3,500 ಕೋಟಿ ವೆಚ್ಚವಾದರೆ ಸ್ಕೈಬಸ್‌ ಯೋಜನೆಗೆ ₹50 ಕೋಟಿಗಿಂತಲೂ ಕಡಿಮೆ ವೆಚ್ಚವಾಗಲಿದೆ ಎಂದು ತಿಳಿಸಿದರು.

ಏನಿದು ಸ್ಕೈಬಸ್: ಇದು ಟ್ರೈನ್‌ ಮಾದರಿಯ ಬಸ್. ಇದರ ಸಂಚಾರಕ್ಕೆ ಮೆಟ್ರೊ ರೈಲು ಯೋಜನೆ ಮಾದರಿಯಲ್ಲಿ ಮೇಲ್ಸೇತುವೆ ನಿರ್ಮಿಸಲಾಗುತ್ತದೆ. ಮೆಟ್ರೊ ರೈಲುಗಳು ಸೇತುವೆ ಮೇಲೆ ಸಂಚರಿಸಿದರೆ, ಸ್ಕೈಬಸ್ ಸೇತುವೆ ಕೆಳ ಭಾಗದಲ್ಲಿ ತೂಗು ತೊಟ್ಟಿಲು ರೂಪದಲ್ಲಿ ಸಂಚರಿಸುತ್ತದೆ.

ಹಾಲಿ ಇರುವ ರಸ್ತೆಗಳ ಮೇಲೆ ಇದರ ಸಂಚಾರಕ್ಕೆ ಮೇಲ್ಸೇತುವೆ ನಿರ್ಮಿಸಿದರೆ ಸಾಕು. ಮೆಟ್ರೊ ನಿಲ್ದಾಣಗಳ ಮಾದರಿಯಲ್ಲೇ ಅಲ್ಲಲ್ಲಿ ನಿಲ್ದಾಣಗಳು ಇರುತ್ತವೆ. ಪ್ರತಿ ಬೋಗಿಯಲ್ಲಿ ಸುಮಾರು 150 ಪ್ರಯಾಣಿಕರು ಕುಳಿತುಕೊಳ್ಳಬಹುದು. ಎರಡರಿಂದ ಆರು ಬೋಗಿಗಳು ಒಮ್ಮೆಗೆ ಸಂಚರಿಸಬಹುದು. ಗಂಟೆಗೆ ಸರಾಸರಿ 100 ಕಿ.ಮೀ ವೇಗದಲ್ಲಿ ಇದು ಸಂಚರಿಸುತ್ತದೆ.‌

‌ಕಾಲಮಿತಿಯಲ್ಲಿ ಹೆದ್ದಾರಿ ಪೂರ್ಣ: ಬೆಂಗಳೂರು– ಮೈಸೂರು ಎಕ್ಸ್‌ಪ್ರೆಸ್‌ ಹೆದ್ದಾರಿ ಯೋಜನೆಯನ್ನು ನಿಗದಿತ ಎರಡು ವರ್ಷಗಳ ಅವಧಿಯಲ್ಲಿ ಪೂರ್ಣ
ಗೊಳಿಸಲಾಗುವುದು. ಯೋಜನೆ ಪೂರ್ಣಗೊಂಡ ಬಳಿಕ ಬೆಂಗಳೂರಿನಿಂದ ಮೈಸೂರಿಗೆ ಕೇವಲ 90 ನಿಮಿಷದಲ್ಲಿ ಪ್ರಯಾಣಿಸಲು ಸಾಧ್ಯವಿದೆ ಎಂದರು.

ಬಿಳಿಗಿರಿರಂಗನಬೆಟ್ಟ ಮೀಸಲು ಅರಣ್ಯದ ಗಡಿಯಿಂದ ಬೆಂಗಳೂರು ತನಕ 170 ಕಿ.ಮೀ ಉದ್ದದ ದ್ವಿಪಥ ರಸ್ತೆಯನ್ನು ನಾಲ್ಕು ಪಥದ ರಸ್ತೆಯನ್ನಾಗಿ ಅಭಿವೃದ್ಧಿಪಡಿಸುವ ಯೋಜನೆಗೂ ಶಂಕುಸ್ಥಾಪನೆ ನೆರವೇರಿಲಾಗಿದೆ.  ₹2,000 ಕೋಟಿ ಮೊತ್ತದ ಯೋಜನೆ ಇದಾಗಿದ್ದು, ಎರಡು ವರ್ಷಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ವಿವರಿಸಿದರು.

‘ರಾಜ್ಯದಲ್ಲಿ 2013– 14ನೇ ಸಾಲಿನಲ್ಲಿ 5,707 ಕಿ.ಮೀ ರಾಷ್ಟ್ರೀಯ ಹೆದ್ದಾರಿ ಇತ್ತು. ಈಗ 13,565 ಕಿ.ಮೀಗೆ ವಿಸ್ತರಿಸಲಾಗುತ್ತಿದೆ. ’ ಎಂದೂ ಅವರು ಹೇಳಿದರು.

ನದಿ ಜೋಡಣೆ: 6 ಲಕ್ಷ ಎಕರೆಗೆ ನೀರು

ದಕ್ಷಿಣ ರಾಜ್ಯಗಳಲ್ಲಿನ ನೀರಿನ ಅಭಾವ ನೀಗಿಸಲು ಗೋದಾವರಿ ನದಿಯ ಹೆಚ್ಚುವರಿ ನೀರನ್ನು ಕಾವೇರಿಗೆ ಹರಿಸಲು ಕೇಂದ್ರ ಸರ್ಕಾರ ಉದ್ದೇಶಿಸಿದೆ. ಇದರಿಂದ ಕರ್ನಾಟಕದಲ್ಲಿ 6 ಲಕ್ಷ ಎಕರೆ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಸಿಗಲಿದೆ ಎಂದು ಗಡ್ಕರಿ ಹೇಳಿದರು.

3000 ಟಿಎಂಸಿ ಅಡಿ ನೀರು ಗೋದಾವರಿಯಿಂದ ಸಮುದ್ರಕ್ಕೆ ಹರಿಯುತ್ತಿದೆ. ಆರಂಭದಲ್ಲಿ 300 ಟಿಎಂಸಿ ಅಡಿ ನೀರನ್ನು ನಾಗಾರ್ಜುನ ಸಾಗರ ಅಣೆಕಟ್ಟು ಮೂಲಕ ಕೃಷ್ಣಾ ನದಿಗೆ ಹರಿಸಲಾಗುವುದು. ಬಳಿಕ ಪೆನ್ನಾರ್ ನದಿಗೆ ನಿರ್ಮಿಸಿರುವ ಸೊಮಸಿಲಾ ಅಣೆಕಟ್ಟಿಗೆ ನೀರು ಸಾಗಲಿದೆ. ಅಲ್ಲಿಂದ ಕಾವೇರಿ ನದಿಗೆ ನೀರು ಹರಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

‘ಒಟ್ಟಾರೆ ಈ ಯೋಜನೆಯಿಂದ ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಿಗೆ ಪ್ರಯೋಜನವಾಗಲಿದೆ’ ಎಂದು ಅವರು ವಿವರಿಸಿದರು.

ಇದಲ್ಲದೆ ಕರ್ನಾಟಕ ಸರ್ಕಾರದ ಸಹಯೋಗದಲ್ಲಿ ಒಟ್ಟಾರೆ 15 ಲಕ್ಷದಿಂದ 20 ಲಕ್ಷ ಎಕರೆಗೆ ನೀರಾವರಿ ಕಲ್ಪಿಸುವ ಯೋಜನೆಗಳನ್ನು ಕೈಗೊಳ್ಳುವ ಉದ್ದೇಶ ಕೇಂದ್ರ ಸರ್ಕಾರಕ್ಕೆ ಇದೆ ಎಂದರು.

* ಕೇಂದ್ರದ ಸಾರಿಗೆ ಯೋಜನೆಗಳ ಅನುಷ್ಠಾನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪೂರ್ಣ ಸಹಕಾರ ನೀಡಿದ್ದಾರೆ. ಅವರು ಕೇಳಿದ ಎಲ್ಲ ಯೋಜನೆಗಳಿಗೂ ಕೇಂದ್ರ ಅನುಮೋದನೆ ನೀಡಿದೆ.

–ನಿತಿನ್ ಗಡ್ಕರಿ, ಕೇಂದ್ರ ಸಚಿವ


* ಎಕ್ಸ್‌ಪ್ರೆಸ್ ಹೈವೆ ಎರಡು ವರ್ಷಗಳಲ್ಲಿ ಪೂರ್ಣ

* ₹ 7,000 ಕೋಟಿ ಮೊತ್ತದ ಯೋಜನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT